ವಿನಯ್ ...
ಅದ್ಭುತವಲ್ಲದಿದ್ದರೂ ಹಿತವೆನಿಸುವ ಗ್ರಾಫಿಕ್ಸ್, ಎಂದಿನಂತೆ ಉಪೇಂದ್ರರ "ಕ್ಲಾಸ್" ಅಭಿನಯ, ಸಾಮಾನ್ಯ ಕಥೆಯಾದರೂ ಊಟಕ್ಕೆ ಉಪ್ಪಿನಕಾಯಿಯಂತಿರುವ ಉಪ್ಪಿಯ "ಪಂಚಿಂಗ್" ಡೈಲಾಗ್ಸ್... ಇದೇ "ಕಠಾರಿವೀರ ಸುರಸುಂದರಾಂಗಿ" ಚಿತ್ರದ ಪ್ಲಸ್ ಪಾಯಿಂಟ್ಸ್..



ಚಿತ್ರ ಕೃಪೆಃ ಸಿನಿಮಾ ಪೋಸ್ಟರ್


ಈ ವಾರದಲ್ಲಿ ನಾನು ನೋಡಿದ ಎರಡನೆ ಚಿತ್ರ ಈ "ಕಠಾರಿವೀರ ಸುರಸುಂದರಾಂಗಿ"... ಮೊದಲ ಚಿತ್ರ "ಅಣ್ಣಾ ಬಾಂಡ್" ಅಷ್ಟು ಹಿಡಿಸದಿದ್ದರೂ ಈ ಚಿತ್ರ ಮೂಡಿಸಿದ "ಹೈಪ್" ಮೇಲೆ ಈ ಚಿತ್ರವನ್ನ ನೋಡಲು ಹೊರಟೆ (ಅದರಲ್ಲೂ ಈ ಚಿತ್ರ ಸಂಪೂರ್ಣ ತ್ರೀ-ಡಿ ಯದ್ದು ಎಂಬ ಪ್ರಚಾರದ ಬಗ್ಗೆ ಕುತೂಹಲವಿತ್ತೆನ್ನಿ..!)

ಚಿತ್ರ ಪ್ರಾರಂಭವಾಗುವುದು ಉಪೇಂದ್ರ (ಉಪೇಂದ್ರ) ಎಂಬ ಒಬ್ಬ ಸಾಮಾನ್ಯ ಮನುಷ್ಯ, ತನ್ನ ಮನದ ಆಸೆಯಂತೆ ಒಂದು ದೊಡ್ಡ ಡಾನ್ ಆಗಲು ಬಯಸುತ್ತಾನೆ. ಇದರ ಸಲುವಾಗಿ ತನ್ನ "ರೋಲ್ ಮಾಡಲ್" ಮಾಜಿ ಡಾನ್ ಮುತ್ತಪ್ಪ ರೈ ಯನ್ನು ಭೇಟಿಯಾಗುತ್ತಾನೆ. ರೈ ಉಪೇಂದ್ರನಿಗೆ ಈ ಫೀಲ್ಡ್ ಬೇಡ, ಎಲ್ಲ ಜನ "ಡಾನ್" ಆಗಲು ಸಾದ್ಯವಿಲ್ಲ, ಸುಮ್ಮನೆ ನಿನ್ನ ಪಾಡಿಗೆ ಇದ್ದು ಬಿಡು, ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಸಲಹೆ ನೀಡಿದರೂ ಸಹ, ಉಪೇಂದ್ರ ಭೂಗತ ಜಗತ್ತಿಗೆ ಕಾಲಿಡುತ್ತಾನೆ ಮತ್ತು ನಗರದ ಕುಖ್ಯಾತ ಅಪರಾಧಿಯ ಅಣ್ಣನನ್ನು ಯಾವುದೇ ಆಯುಧವಿಲ್ಲದೇ ಬರೀ "ಮಾತಿನಲ್ಲೇ" ಕೊಲ್ಲುತ್ತಾನೆ...!

ಈ ಸುದ್ದಿ ದುಬೈನಲ್ಲಿರುವ ಅವನ ಕಿರಿಯ ಸಹೋದರನಿಗೆ ಮುಟ್ಟುತ್ತದೆ, ಸಾಲದಕ್ಕೆ ಅವನು ಪ್ರಖ್ಯಾತ ಡಾನ್ ಅಗಿರುತ್ತಾನೆ! ತನ್ನ ಅಣ್ಣನ ಕೊಲೆಯ ಪ್ರತೀಕಾರ ತೀರಿಸಿಕೊಳ್ಳಲು ಅವನು ಭಾರತಕ್ಕೆ ಬರುತ್ತಾನೆ. ಹೀಗೆ ಡಾನ್ ಮತ್ತು ಉಪೇಂದ್ರ ಮುಖಾಮುಖಿಯಾದ ಸಂದರ್ಭದಲ್ಲಿ ಆ ಡಾನ್ ಬಾಂಬಿಗೆ ಹೆದರಿದ್ದನ್ನು ನೋಡಿ ಉಪೇಂದ್ರ ಈ ಡಾನ್ ಆಗುವ ಸಹವಾಸವೇ ಬೇಡ ಎಂದು ವಾಪಸ್ ಹೋಗಲು ಅಣಿಯಾಗುತ್ತಾನೆ. ಅದರೆ ಅ "ಡಾನ್" ಉಪೇಂದ್ರನ ಬೆನ್ನಿಗೆ ಶೂಟ್ ಮಾಡಿ ಕೊಂದು ಅವನ ದೇಹವನ್ನು ನೀರಿಗೆ ಎಸೆಯುತ್ತಾನೆ.

ಸಾವನ್ನಪ್ಪಿದ ಉಪೇಂದ್ರ ಸೀದಾ ಆಕಾಶ ಮಾರ್ಗವಾಗಿ ಸ್ವರ್ಗ-ನರಕದ ಬಾಗಿಲ ಬಳಿ ತಲಪುತ್ತಾನೆ. ಭೂಲೋಕದಲ್ಲಿ ತನ್ನ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಸಮಾನಂಶದಲ್ಲಿ ಮಾಡಿದ ಕಾರಣ ಅವನನ್ನು ಯಾವ ಧೂತರು ಮುಟ್ಟಲಾಗುವುದಿಲ್ಲ, ನಂತರ ಉಪೇಂದ್ರ ಸ್ವತ: ನರಕಕ್ಕೆ ಹೋಗಿ ಅಲ್ಲಿ ತನ್ನ "ವರಸೆ" ತೋರಿಸುತ್ತಾನೆ. ಯಮ (ಅಂಬರೀಶ್) ಉಪೇಂದ್ರನಿಗೆ ಅವನ ಕರ್ಮಕ್ಕೆ ತಕ್ಕಂತೆ ತಿಂಗಳ 15 ದಿನ ನರಕದಲ್ಲಿ ಮತ್ತು 15 ದಿನ ಸ್ವರ್ಗದಲ್ಲಿ ಇರಲು ಆದೇಶಿಸುತ್ತಾನೆ.

ಹೀಗಿರುವಾಗ ಒಂದು ದಿನ ಉಪೇಂದ್ರ ನರಕಲೋಕದ ಕಿಟಕಿಯಿಂದ ಇಂದ್ರ (ಶ್ರೀಧರ್) ನ ಮಗಳು ಇಂದ್ರಜಾ (ರಮ್ಯಾ) ಗಾಯನ ಕೇಳಿ ಮನಸೋತು ಚಿತ್ರಗುಪ್ತ (ದೊಡಣ್ಣ) ನ "ಬ್ಲಾಕ್ ಮೇಲ್" ಮಾಡಿ (ಎಮ್.ಎಮ್.ಎಸ್ ಸಹಾಯದಿಂದ) ಅವನ ಸಹಾಯದಿಂದ ಕೆಲ ಸಮಯಕ್ಕೆ ಸ್ವರ್ಗಕ್ಕೂ ಹೋಗುತ್ತಾನೆ. ಅಲ್ಲಿ ಅವಳ ನೃತ್ಯ ನೋಡಿ ಅವಳಿಗೆ ಮನ ಸೋಲುತ್ತಾನೆ. ಹೇಗಾದರೂ ಮಾಡಿ ಸ್ವರ್ಗಕ್ಕೆ ಹೋಗಲು ದಾರಿ ಹುಡುಕುವ ಉಪೇಂದ್ರ ಯಮನ ಸಹಾಯಕ ಚಿತ್ರಗುಪ್ತನ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ. ಅಂತಿಮವಾಗಿ, ಹಿಂಸೆಗೊಳಗಾದ ಯಮ ನರಕದ ಬಿಟ್ಟು ಸ್ವರ್ಗಕ್ಕೆ ಹೋಗಲು ಉಪೇಂದ್ರನಿಗೆ ಹೇಳುತ್ತಾನೆ. ಸ್ವರ್ಗಕ್ಕೆ ಮರುಳಿದ ನಂತರ ಉಪೇಂದ್ರ-ಇಂದ್ರಜಾ ನಡುವೆ ಪ್ರೇಮ ಪ್ರಾರಂಭವಾಗುತ್ತದೆ.

ಇದನ್ನು ಕಂಡ ಇಂದ್ರ ಉಪೇಂದ್ರನನ್ನು ಸ್ವರ್ಗದಿಂದ ಹೊರಹಾಕುತ್ತಾನೆ ಮತ್ತು ಇಂದ್ರಜಾಳ ಸ್ವಯಂವರಕ್ಕೆ ತಯಾರಿ ನೆಡೆಸುತ್ತಾನೆ. ಅದರೂ ಅಲ್ಲೂ ಅವರಿಬ್ಬರ ಪ್ರೀತಿ ಗೆಲ್ಲುತ್ತದೆ ಮತ್ತು ಇಂದ್ರಜಾ ಉಪೇಂದ್ರನನ್ನು ಸ್ವಯಂವರದಲ್ಲಿ ವರಿಸುತ್ತಾಳೆ. ನಂತರದ ಸನ್ನಿವೇಶದಲ್ಲಿ ಬ್ರಹ್ಮನು ಉಪೇಂದ್ರನಿಗೆ ಭೂಮಿಯ ಮರಳಲು ಆದೇಶಿಸಿ, ಅವನು ಮಾಡುವ ಕಾರ್ಯ ಅವನಿಗೆ ಸ್ವರ್ಗಕ್ಕೋ ಇಲ್ಲಾ ನರಕಕ್ಕೋ ಹೋಗುವ ಮಾರ್ಗವಾಗುತ್ತದೆ ಎಂದು ಆದೇಶಿಸುತ್ತಾನೆ. ಬ್ರಹ್ಮನ ಅಣತಿಯಂತೆ ಉಪೇಂದ್ರ, ಯಮ ಮತ್ತು ಚಿತ್ರಗುಪ್ತರು ಭೂಮಿಗೆ ಮರಳುತ್ತಾರೆ (ಇಂದ್ರಜಾಳೂ ಅವರನ್ನ ಹಿಂಬಾಲಿಸುತ್ತಾಳೆ..). ಭೂಮಿಗೆ ಮರುಳಿದ ಉಪೇಂದ್ರ ತನ್ನ ಕೊಂದ "ಡಾನ್" ನಿಗೆ ಎದುರಾಗಿ ಸೇಡು ತೀರಿಸಿಕೊಳ್ಳುತ್ತಾನೋ ಅಥವಾ ಹಾಗೇ ಬಿಡುತ್ತಾನೋ ಎಂಬುದು ಉಳಿದ ಕಥೆಯ ಸಾರಾಂಶ...

ಈ ಚಿತ್ರವು 2003 ರಲ್ಲಿ ಬಿಡುಗಡೆಯಾದ ಉಪೇಂದ್ರರ "ರಕ್ತ ಕಣ್ಣೇರು" ಚಿತ್ರದ ಮುಂದುವರಿದ ಭಾಗದಂತಿದೆ. ಏಕೆಂದರೆ ಉಪೇಂದ್ರರ ತಂದೆಯ ಪಾತ್ರ "ಮೋಹನ್" ಅಗಿ ಮುಂದುವರಿದಿದೆ. ಅವನ ತಾಯಿ ಅಂಬಿಕಾ ಮತ್ತು ಮೋಹನನ ಫಾರಿನ್ "ಪ್ರೇಮ ಪ್ರಸಂಗ" ಈ ಚಿತ್ರದಲ್ಲಿ ಬರುತ್ತದೆ. ಮೋಹನ ಪಾತ್ರದ ಉಪೇಂದ್ರ ಇಲ್ಲಿ ಯಮ ಚಿತ್ರಗುಪ್ತರಿಗೆ "ಮನೋರಂಜನೆ" ಕೊಡುವ ಸಮಯದಲ್ಲಿ ಹೇಳುವ ಡೈಲಾಗ್ ಸೂಪರ್..! ಅದನ್ನ ನೀವು ಚಿತ್ರ ನೋಡಿಯೇ ಅನಂದಿಸಬೇಕು. "ಚಿಕ್ಕ-ಚಿಕ್ಕ" ಮತ್ತು "ಬೀಜ" ದ ಡೈಲಾಗ್ಸ್ ಮತ್ತೊಂದು ಹೈಲೈಟ್. ಒಂದು ಹಾಡು "ಮುತ್ತಿನಂತ..(ಊರಿಗೆ ನೀ..)" ರೀಮಿಕ್ಸ್ ಚೆನ್ನಾಗಿದೆ.. ಗ್ರಾಫಿಕ್ಸ್ ಪ್ರಭಾವ ಕೇವಲ "ನೀರ ಗುಳ್ಳೆ" ಮತ್ತು "ಕ್ಲೋಸ್ ಶಾಟ್" ಗಳಿಗೆ ಮಾತ್ರ ಸೀಮಿತ.. (ಬಹುಶಃ ಮೊದಲ ಪ್ರಯತ್ನದ ಕಾರಣಕ್ಕೇನೋ..! ಚಿತ್ರವನ್ನು ಆನಂದಿಸಲು ನೀವು ಉತ್ತಮ ತ್ರೀ-ಡಿ ವ್ಯವಸ್ಥೆಯಿರುವ ಚಿತ್ರಮಂದಿರಗಳಿಗೆ ಹೋಗಿಯೇ ನೋಡಬೇಕು..)

ಒಟ್ಟಿನಲ್ಲಿ ಉಪ್ಪಿ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ "ಕಠಾರಿವೀರ ಸುರಸುಂದರಾಂಗಿ"



ವಿನಯ್ ...
ಅಂತೂ ಬಹು ನಿರೀಕ್ಷೆಯ "ಅಣ್ಣಾ ಬಾಂಡ್" ಚಿತ್ರ ಮೇ ೧ ರಂದು ರಾಜ್ಯದ, ಹೊರರಾಜ್ಯದ ಮತ್ತು ವಿದೇಶಗಳಲ್ಲಿನ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಬಹುನಿರೀಕ್ಷೆಯೊಂದಿಗೆ ಚಿತ್ರ ನೋಡ ಹೊರಟ ಅಭಿಮಾನಿ ಪ್ರಭುಗಳಿಗೆ "ದುನಿಯಾ" ಸೂರಿ ಭಾರಿ ನಿರಾಶೆ ಮಾಡಿಬಿಟ್ಟಿದ್ದಾರೆ. ಅಂತೂ "ಜಾಕಿ" ಚಿತ್ರದ ನಂತರದ ಅತಿನಿರೀಕ್ಷೆಯೋ, "ಬಾಂಡ್" ಹೆಸರ ಪ್ರಭಾವವೋ..., "ಅಣ್ಣಾ ಬಾಂಡ್" ಎಲ್ಲವನ್ನು ತಲೆಕೆಳಗು ಮಾಡಿಬಿಟ್ಟಿದೆ...!



ಚಿತ್ರ ಕೃಪೆಃ havyas90downloads

ಚಿತ್ರದ ಸಾರಂಶವಿಷ್ಟೇ: ಸಿನೆಮಾ ಶುರುವಾಗುವುದೇ ಕೆಲವು ವ್ಯಕ್ತಿಗಳು (ರೌಡಿಗಳು ಮತ್ತು ಸಮಾಜಘಾತಕ ಶಕ್ತಿಗಳು) ಹುಚ್ಚರಂತೆ ವರ್ತಿಸುತ್ತ "ಅಣ್ಣಾ ಬಾಂಡ್ ನೋಡ್ತಾಯಿದ್ದಾನೆ, ಕೆಟ್ಟ ಕೆಲಸ ಮಾಡಬೇಡಿ..." ಎಂಬ ಮಾತು ಬಡಬಡಿಸುತ್ತ, ಅಕಾಶ ನೋಡುತ್ತ ನಗರದ ವಿವಿದೆಡೆ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ನಗರ ತುಂಬ ಇದೇ "ಸೆನ್ಸೆಷನ್ ನ್ಯೂಸ್". ಇದೆಲ್ಲದರ ನಡುವೆ ನಮ್ಮ ನಾಯಕ ಬಾಂಡ್ ರವಿ (ಪುನೀತ್) ಮಾರ್ಕೆಟಿನ ತರಕಾರಿ ಕಸದ ನಡುವೆ ಬಿದ್ದಿರುವ ೧೦-೧೫ ಹೆಣಗಳ ಸಾಲಿನಲ್ಲಿ ಕಾಣಿಸುತ್ತಾರೆ ( ಮೊದಲ ಸೀನಿನಲ್ಲೇ ಅವರು ಹೋಗಿಬಿಟ್ಟರಾ ಎಂದು ಅಂದುಕೊಳ್ಳಬೇಡಿ...!!). ಅಲ್ಲಿಂದ ಹೆಣಗಳನ್ನ ಶವಾಗಾರಕ್ಕೆ ಸಾಗಿಸುವ ಪೋಲೀಸರು ತಮ್ಮ ಕಾರ್ಯ ಮುಗಿಸಿ ಹೊರಟಾಗ, ದಗ್ಗನೆ ಏಳುತ್ತಾರೆ ನೋಡಿ ನಮ್ಮ ಬಾಂಡ್..!! ಸೀದ ಏದ್ದವರೆ ರಾಜಕಾರಣಿಯ ಮಗನನ್ನ ಹೊತ್ತೊಯ್ದು "ಚಿತ್ರ-ವಿಚಿತ್ರ" ಕಾಟ ಕೊಟ್ಟು ಸತಾಯಿಸುತ್ತಾರೆ. ಎಲ್ಲ "ಚಾರ್ಲಿ" ಗೋಸ್ಕರ..!! ಅಂತೂ ಇದು "ಚಾರ್ಲಿ" ಹುಡುಕುವ ಕಾರ್ಯ ಎಂದು ಅರಿವಿಗೆ ಬರುವ ಮೊದಲೇ "ಹೀ ಇಸ್ಸ್ ಅಣ್ಣಾ ಬಾಂಡ್" ಹಾಡು ಬಂದಿರುತ್ತದೆ. "ಮೂಳೆಗಾಡಿ" ಯ ಮೇಲೆ ಆಸೀನರಾದ ಅಣ್ಣಾ ಬಾಂಡ್ ನ ಗ್ರಾಫಿಕ್ಸ್ ನ ದೃಶ್ಯವೈಭವ... ( ಗಾಡಿಯ ರಚನೆ ಪ್ರಕೃತಿ ಬನವಾಸಿಯವರದ್ದು). ನಂತರ ದೃಶ್ಯ "ಸದಾ ಸಂಚಾರಿ" ಮನೆಯಲ್ಲಿ ಬಾಂಡ್ ರವಿ ಒಬ್ಬ ನಿರ್ದೇಶಕನ (ನೀನಾಸಂ ಸತೀಶ್) ಹಿಡಿದು ತಂದು ಅವನ ಹತ್ತಿರ ತನ್ನ "ಜೀವನದ ಕಥೆಯನ್ನು" ಸಿನಿಮಾ ಮಾಡುವ ಬಗ್ಗೆ ಹೇಳುತ್ತಾನೆ. ಅಲ್ಲಿಗೆ ಶುರುವಾಗುತ್ತದೆ "ರವಿ" ಬಾಂಡ್ ಆದ ಬಗೆ...

ಚಿತ್ರದ ಮೊದಲಾರ್ಧ ರವಿ "ಮೀರಾ" (ಪ್ರಿಯಮಣಿ) ಳ ಓಲೈಕೆಯಲ್ಲೇ ಕಳೆದುಹೋಗುತ್ತದೆ. ಆಗಲೂ ಪ್ರೇಕ್ಷಕ ಪ್ರಭುವಿಗೆ "ಈ ಚಾರ್ಲಿ ಯಾರು..?" ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅಂತೂ ವಿರಾಮದ ಸಮಯದಲ್ಲಿ ನಮ್ಮ ನಾಯಕನಿಗೆ ತನ್ನ ದೋಸ್ತಿ ಚಪಾತಿ ಬಾಬುವಿನ (ರಂಗಾಯಣ ರಘು) ಜೊತೆ ಸೇರಿ "ದೊಡ್ಡ ಮನುಷ್ಯನಾಗುವ" ಹಂಬಲದೊಂದಿಗೆ ಸಿಟಿ ಕಡೆಗೆ ಪಯಣ ಮಾಡುವ ಹೊತ್ತಿಗೆ ತಾನು ಕೆಲಸ ಮಾಡುತ್ತಿದ್ದ "ಉಳುಕು ಸ್ಪೆಷಲಿಸ್ಟ್" ಅಂಗಡಿಯ ಮಾಲಿಕನ (ವಿ. ಮನೋಹರ್) ಕೊಲೆಯ ಅರೋಪ ತಲೆ ಮೇಲೆ ಬೀಳುತ್ತದೆ. ಅದೇ ಸಮಯದಲ್ಲಿ ಒಬ್ಬ ಸೇನ ಯೋಧ ಇವರನ್ನ ದೂರದ ಪ್ರದೇಶದಲ್ಲಿನ ಮನೆಯೊಂದಕ್ಕೆ ಕರೆದೊಯ್ಯುತ್ತಾನೆ. ಅವನನ್ನು ಪೋಲೀಸನೆಂದೇ ಭಾವಿಸುವ ಇವರು ಮನೆ ತಲುಪಿದಾಗ ತಮ್ಮನ್ನು ಆ ಮನೆಗೆ ಕರೆತಂದ ನಿಜ ವಿಷಯ ಗೊತ್ತಾಗುತ್ತದೆ (ಹಾಗೇ ಪ್ರೇಕ್ಷಕರ ಮುಂದೆ "ಚಾರ್ಲಿ" ಯ (ಜಾಕಿ ಶ್ರಾಫ್) ಕಥೆ ಬಿಚ್ಚಿಕೊಳ್ಳುತ್ತದೆ..)

ಮುಂದೆ "ಚಾರ್ಲಿ" ದ್ವೇಷ, ಮೀರಾಳ ತಂದೆ ಮತ್ತು ಚಾರ್ಲಿಯ ನಡುವೆ ಇರುವ ಸೇಡು, ಮೀರಾಳ ತಂಗಿ ದಿವ್ಯಾ (ನಿಧಿ ಸುಬ್ಬಯ್ಯ) ಗೂ ಚಾರ್ಲಿಗೂ ಇರುವ ಸಂಬಂಧಗಳ ನಡುವೆ ಕಥೆ ಗಿರಕಿ ಹೊಡೆಯುತ್ತದೆ. ಚಿತ್ರದ ಕಥೆ ಒಂದೇ ಏಳೆಯದದಾದರೂ ಬರೀ "ಹಾಡು" ಮತ್ತು "ಫೈಟ್" ಗಳಿಂದ ತುಂಬಿ ಹೋಗಿದೆ. "ಜಾಕಿ" ಚಿತ್ರವನ್ನು ಈ ಚಿತ್ರ ಮೀರುವುದೆಂಬ ನಿರೀಕ್ಷೆ ಹೊತ್ತ ಪ್ರೇಕ್ಷಕ ಪ್ರಭುವಿಗೆ ನಿರಾಸೆಯಾಗುವುದೇ ಇಲ್ಲಿ. ಅದೇ ಏಕತನದ ಸಾಹಿತ್ಯ (ಯೋಗ್ ರಾಜ್ ಭಟ್) ಮತ್ತು ಸಂಗೀತ (ವಿ. ಹರಿಕ್ರಿಷ್ಣ) ಸೂರಿಯವರನ್ನು ಇನ್ನೂ ತಮ್ಮ ಹಿಂದಿನ ಚಿತ್ರಗಳ ಗುಂಗಿನಿಂದ ಹೊರಗೆ ತಂದಿಲ್ಲವೆಂದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ.(ಬಹುಶ: ಅದಕ್ಕೆ ಏನೋ ವಾರದ ಕೊನೆಯ ದಿನ (ಶನಿವಾರ) ವಾದರೂ ಅರ್ಧ ಚಿತ್ರಮಂದಿರ ಸರಿಯಾಗಿ ತುಂಬಿರಲಿಲ್ಲ..!!)

ಕೊನೆಯ ಮಾತು: ಸೂರಿಯವರು ಚಿತ್ರದ ಕತೆಯನ್ನು ಮರೆತು ಕೇವಲ "ಬಾಂಡ್ ವೈಭವದ" ಹಿಂದೆ ಹೊರಟ ಫಲ ಚಿತ್ರದುದ್ದಕ್ಕೂ ಕಾಣುತ್ತದೆ. ಇಬ್ಬರು "ಸುಂದರ ಹೀರೋಯಿನ್" ಗಳಿದ್ದರೂ ಕೇವಲ "ನೆಪ" ಮಾತ್ರದ ಪಾತ್ರವಾಗಿಬಿಟ್ಟಿದ್ದಾರೆ. ಮಿಕ್ಕ ಪಾತ್ರಗಳು ಕೇವಲ "ಬಂದು ಹೋಗುವ" ಮಟ್ಟಕ್ಕಿವೆ. ಚಿತ್ರವೆಲ್ಲಾ "ಪುನೀತ್-ರಘು" ಮಯವೆಂದರೂ ಅಡ್ಡಿಯಿಲ್ಲ. ಜಾಕಿ ಶ್ರಾಫ್ ರ "ಕನ್ನಡ" ತಾಳ್ಮೆಗೆಡಿಸುತ್ತದೆ (ಅವರ ದನಿಗೆ "ದಬ್ಬಿಂಗ್" ಬೇಕಿತ್ತು..). ಅಂತೂ ಒಂದಂತೂ ನಿಜ, ಸತ್ವವಿಲ್ಲದ ಕಥೆ.., ನಿರೀಕ್ಷೆಯ "ಭಾರ"... ಎಲ್ಲಾ ಸೇರಿ ಬಾಂಡ್ ಅನ್ನು "ಅನ್ನ" ವಿಲ್ಲದೆ ಸೊರಗಿಸಿದೆ..!!

Anna bond, puneeth