ವಿನಯ್ ...
ಅದ್ಭುತವಲ್ಲದಿದ್ದರೂ ಹಿತವೆನಿಸುವ ಗ್ರಾಫಿಕ್ಸ್, ಎಂದಿನಂತೆ ಉಪೇಂದ್ರರ "ಕ್ಲಾಸ್" ಅಭಿನಯ, ಸಾಮಾನ್ಯ ಕಥೆಯಾದರೂ ಊಟಕ್ಕೆ ಉಪ್ಪಿನಕಾಯಿಯಂತಿರುವ ಉಪ್ಪಿಯ "ಪಂಚಿಂಗ್" ಡೈಲಾಗ್ಸ್... ಇದೇ "ಕಠಾರಿವೀರ ಸುರಸುಂದರಾಂಗಿ" ಚಿತ್ರದ ಪ್ಲಸ್ ಪಾಯಿಂಟ್ಸ್..



ಚಿತ್ರ ಕೃಪೆಃ ಸಿನಿಮಾ ಪೋಸ್ಟರ್


ಈ ವಾರದಲ್ಲಿ ನಾನು ನೋಡಿದ ಎರಡನೆ ಚಿತ್ರ ಈ "ಕಠಾರಿವೀರ ಸುರಸುಂದರಾಂಗಿ"... ಮೊದಲ ಚಿತ್ರ "ಅಣ್ಣಾ ಬಾಂಡ್" ಅಷ್ಟು ಹಿಡಿಸದಿದ್ದರೂ ಈ ಚಿತ್ರ ಮೂಡಿಸಿದ "ಹೈಪ್" ಮೇಲೆ ಈ ಚಿತ್ರವನ್ನ ನೋಡಲು ಹೊರಟೆ (ಅದರಲ್ಲೂ ಈ ಚಿತ್ರ ಸಂಪೂರ್ಣ ತ್ರೀ-ಡಿ ಯದ್ದು ಎಂಬ ಪ್ರಚಾರದ ಬಗ್ಗೆ ಕುತೂಹಲವಿತ್ತೆನ್ನಿ..!)

ಚಿತ್ರ ಪ್ರಾರಂಭವಾಗುವುದು ಉಪೇಂದ್ರ (ಉಪೇಂದ್ರ) ಎಂಬ ಒಬ್ಬ ಸಾಮಾನ್ಯ ಮನುಷ್ಯ, ತನ್ನ ಮನದ ಆಸೆಯಂತೆ ಒಂದು ದೊಡ್ಡ ಡಾನ್ ಆಗಲು ಬಯಸುತ್ತಾನೆ. ಇದರ ಸಲುವಾಗಿ ತನ್ನ "ರೋಲ್ ಮಾಡಲ್" ಮಾಜಿ ಡಾನ್ ಮುತ್ತಪ್ಪ ರೈ ಯನ್ನು ಭೇಟಿಯಾಗುತ್ತಾನೆ. ರೈ ಉಪೇಂದ್ರನಿಗೆ ಈ ಫೀಲ್ಡ್ ಬೇಡ, ಎಲ್ಲ ಜನ "ಡಾನ್" ಆಗಲು ಸಾದ್ಯವಿಲ್ಲ, ಸುಮ್ಮನೆ ನಿನ್ನ ಪಾಡಿಗೆ ಇದ್ದು ಬಿಡು, ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಸಲಹೆ ನೀಡಿದರೂ ಸಹ, ಉಪೇಂದ್ರ ಭೂಗತ ಜಗತ್ತಿಗೆ ಕಾಲಿಡುತ್ತಾನೆ ಮತ್ತು ನಗರದ ಕುಖ್ಯಾತ ಅಪರಾಧಿಯ ಅಣ್ಣನನ್ನು ಯಾವುದೇ ಆಯುಧವಿಲ್ಲದೇ ಬರೀ "ಮಾತಿನಲ್ಲೇ" ಕೊಲ್ಲುತ್ತಾನೆ...!

ಈ ಸುದ್ದಿ ದುಬೈನಲ್ಲಿರುವ ಅವನ ಕಿರಿಯ ಸಹೋದರನಿಗೆ ಮುಟ್ಟುತ್ತದೆ, ಸಾಲದಕ್ಕೆ ಅವನು ಪ್ರಖ್ಯಾತ ಡಾನ್ ಅಗಿರುತ್ತಾನೆ! ತನ್ನ ಅಣ್ಣನ ಕೊಲೆಯ ಪ್ರತೀಕಾರ ತೀರಿಸಿಕೊಳ್ಳಲು ಅವನು ಭಾರತಕ್ಕೆ ಬರುತ್ತಾನೆ. ಹೀಗೆ ಡಾನ್ ಮತ್ತು ಉಪೇಂದ್ರ ಮುಖಾಮುಖಿಯಾದ ಸಂದರ್ಭದಲ್ಲಿ ಆ ಡಾನ್ ಬಾಂಬಿಗೆ ಹೆದರಿದ್ದನ್ನು ನೋಡಿ ಉಪೇಂದ್ರ ಈ ಡಾನ್ ಆಗುವ ಸಹವಾಸವೇ ಬೇಡ ಎಂದು ವಾಪಸ್ ಹೋಗಲು ಅಣಿಯಾಗುತ್ತಾನೆ. ಅದರೆ ಅ "ಡಾನ್" ಉಪೇಂದ್ರನ ಬೆನ್ನಿಗೆ ಶೂಟ್ ಮಾಡಿ ಕೊಂದು ಅವನ ದೇಹವನ್ನು ನೀರಿಗೆ ಎಸೆಯುತ್ತಾನೆ.

ಸಾವನ್ನಪ್ಪಿದ ಉಪೇಂದ್ರ ಸೀದಾ ಆಕಾಶ ಮಾರ್ಗವಾಗಿ ಸ್ವರ್ಗ-ನರಕದ ಬಾಗಿಲ ಬಳಿ ತಲಪುತ್ತಾನೆ. ಭೂಲೋಕದಲ್ಲಿ ತನ್ನ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಸಮಾನಂಶದಲ್ಲಿ ಮಾಡಿದ ಕಾರಣ ಅವನನ್ನು ಯಾವ ಧೂತರು ಮುಟ್ಟಲಾಗುವುದಿಲ್ಲ, ನಂತರ ಉಪೇಂದ್ರ ಸ್ವತ: ನರಕಕ್ಕೆ ಹೋಗಿ ಅಲ್ಲಿ ತನ್ನ "ವರಸೆ" ತೋರಿಸುತ್ತಾನೆ. ಯಮ (ಅಂಬರೀಶ್) ಉಪೇಂದ್ರನಿಗೆ ಅವನ ಕರ್ಮಕ್ಕೆ ತಕ್ಕಂತೆ ತಿಂಗಳ 15 ದಿನ ನರಕದಲ್ಲಿ ಮತ್ತು 15 ದಿನ ಸ್ವರ್ಗದಲ್ಲಿ ಇರಲು ಆದೇಶಿಸುತ್ತಾನೆ.

ಹೀಗಿರುವಾಗ ಒಂದು ದಿನ ಉಪೇಂದ್ರ ನರಕಲೋಕದ ಕಿಟಕಿಯಿಂದ ಇಂದ್ರ (ಶ್ರೀಧರ್) ನ ಮಗಳು ಇಂದ್ರಜಾ (ರಮ್ಯಾ) ಗಾಯನ ಕೇಳಿ ಮನಸೋತು ಚಿತ್ರಗುಪ್ತ (ದೊಡಣ್ಣ) ನ "ಬ್ಲಾಕ್ ಮೇಲ್" ಮಾಡಿ (ಎಮ್.ಎಮ್.ಎಸ್ ಸಹಾಯದಿಂದ) ಅವನ ಸಹಾಯದಿಂದ ಕೆಲ ಸಮಯಕ್ಕೆ ಸ್ವರ್ಗಕ್ಕೂ ಹೋಗುತ್ತಾನೆ. ಅಲ್ಲಿ ಅವಳ ನೃತ್ಯ ನೋಡಿ ಅವಳಿಗೆ ಮನ ಸೋಲುತ್ತಾನೆ. ಹೇಗಾದರೂ ಮಾಡಿ ಸ್ವರ್ಗಕ್ಕೆ ಹೋಗಲು ದಾರಿ ಹುಡುಕುವ ಉಪೇಂದ್ರ ಯಮನ ಸಹಾಯಕ ಚಿತ್ರಗುಪ್ತನ ಮೂಲಕ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ. ಅಂತಿಮವಾಗಿ, ಹಿಂಸೆಗೊಳಗಾದ ಯಮ ನರಕದ ಬಿಟ್ಟು ಸ್ವರ್ಗಕ್ಕೆ ಹೋಗಲು ಉಪೇಂದ್ರನಿಗೆ ಹೇಳುತ್ತಾನೆ. ಸ್ವರ್ಗಕ್ಕೆ ಮರುಳಿದ ನಂತರ ಉಪೇಂದ್ರ-ಇಂದ್ರಜಾ ನಡುವೆ ಪ್ರೇಮ ಪ್ರಾರಂಭವಾಗುತ್ತದೆ.

ಇದನ್ನು ಕಂಡ ಇಂದ್ರ ಉಪೇಂದ್ರನನ್ನು ಸ್ವರ್ಗದಿಂದ ಹೊರಹಾಕುತ್ತಾನೆ ಮತ್ತು ಇಂದ್ರಜಾಳ ಸ್ವಯಂವರಕ್ಕೆ ತಯಾರಿ ನೆಡೆಸುತ್ತಾನೆ. ಅದರೂ ಅಲ್ಲೂ ಅವರಿಬ್ಬರ ಪ್ರೀತಿ ಗೆಲ್ಲುತ್ತದೆ ಮತ್ತು ಇಂದ್ರಜಾ ಉಪೇಂದ್ರನನ್ನು ಸ್ವಯಂವರದಲ್ಲಿ ವರಿಸುತ್ತಾಳೆ. ನಂತರದ ಸನ್ನಿವೇಶದಲ್ಲಿ ಬ್ರಹ್ಮನು ಉಪೇಂದ್ರನಿಗೆ ಭೂಮಿಯ ಮರಳಲು ಆದೇಶಿಸಿ, ಅವನು ಮಾಡುವ ಕಾರ್ಯ ಅವನಿಗೆ ಸ್ವರ್ಗಕ್ಕೋ ಇಲ್ಲಾ ನರಕಕ್ಕೋ ಹೋಗುವ ಮಾರ್ಗವಾಗುತ್ತದೆ ಎಂದು ಆದೇಶಿಸುತ್ತಾನೆ. ಬ್ರಹ್ಮನ ಅಣತಿಯಂತೆ ಉಪೇಂದ್ರ, ಯಮ ಮತ್ತು ಚಿತ್ರಗುಪ್ತರು ಭೂಮಿಗೆ ಮರಳುತ್ತಾರೆ (ಇಂದ್ರಜಾಳೂ ಅವರನ್ನ ಹಿಂಬಾಲಿಸುತ್ತಾಳೆ..). ಭೂಮಿಗೆ ಮರುಳಿದ ಉಪೇಂದ್ರ ತನ್ನ ಕೊಂದ "ಡಾನ್" ನಿಗೆ ಎದುರಾಗಿ ಸೇಡು ತೀರಿಸಿಕೊಳ್ಳುತ್ತಾನೋ ಅಥವಾ ಹಾಗೇ ಬಿಡುತ್ತಾನೋ ಎಂಬುದು ಉಳಿದ ಕಥೆಯ ಸಾರಾಂಶ...

ಈ ಚಿತ್ರವು 2003 ರಲ್ಲಿ ಬಿಡುಗಡೆಯಾದ ಉಪೇಂದ್ರರ "ರಕ್ತ ಕಣ್ಣೇರು" ಚಿತ್ರದ ಮುಂದುವರಿದ ಭಾಗದಂತಿದೆ. ಏಕೆಂದರೆ ಉಪೇಂದ್ರರ ತಂದೆಯ ಪಾತ್ರ "ಮೋಹನ್" ಅಗಿ ಮುಂದುವರಿದಿದೆ. ಅವನ ತಾಯಿ ಅಂಬಿಕಾ ಮತ್ತು ಮೋಹನನ ಫಾರಿನ್ "ಪ್ರೇಮ ಪ್ರಸಂಗ" ಈ ಚಿತ್ರದಲ್ಲಿ ಬರುತ್ತದೆ. ಮೋಹನ ಪಾತ್ರದ ಉಪೇಂದ್ರ ಇಲ್ಲಿ ಯಮ ಚಿತ್ರಗುಪ್ತರಿಗೆ "ಮನೋರಂಜನೆ" ಕೊಡುವ ಸಮಯದಲ್ಲಿ ಹೇಳುವ ಡೈಲಾಗ್ ಸೂಪರ್..! ಅದನ್ನ ನೀವು ಚಿತ್ರ ನೋಡಿಯೇ ಅನಂದಿಸಬೇಕು. "ಚಿಕ್ಕ-ಚಿಕ್ಕ" ಮತ್ತು "ಬೀಜ" ದ ಡೈಲಾಗ್ಸ್ ಮತ್ತೊಂದು ಹೈಲೈಟ್. ಒಂದು ಹಾಡು "ಮುತ್ತಿನಂತ..(ಊರಿಗೆ ನೀ..)" ರೀಮಿಕ್ಸ್ ಚೆನ್ನಾಗಿದೆ.. ಗ್ರಾಫಿಕ್ಸ್ ಪ್ರಭಾವ ಕೇವಲ "ನೀರ ಗುಳ್ಳೆ" ಮತ್ತು "ಕ್ಲೋಸ್ ಶಾಟ್" ಗಳಿಗೆ ಮಾತ್ರ ಸೀಮಿತ.. (ಬಹುಶಃ ಮೊದಲ ಪ್ರಯತ್ನದ ಕಾರಣಕ್ಕೇನೋ..! ಚಿತ್ರವನ್ನು ಆನಂದಿಸಲು ನೀವು ಉತ್ತಮ ತ್ರೀ-ಡಿ ವ್ಯವಸ್ಥೆಯಿರುವ ಚಿತ್ರಮಂದಿರಗಳಿಗೆ ಹೋಗಿಯೇ ನೋಡಬೇಕು..)

ಒಟ್ಟಿನಲ್ಲಿ ಉಪ್ಪಿ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ "ಕಠಾರಿವೀರ ಸುರಸುಂದರಾಂಗಿ"



0 Responses

Post a Comment