ವಿನಯ್ ...
ಅಂತೂ ಬಹು ನಿರೀಕ್ಷೆಯ "ಅಣ್ಣಾ ಬಾಂಡ್" ಚಿತ್ರ ಮೇ ೧ ರಂದು ರಾಜ್ಯದ, ಹೊರರಾಜ್ಯದ ಮತ್ತು ವಿದೇಶಗಳಲ್ಲಿನ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಬಹುನಿರೀಕ್ಷೆಯೊಂದಿಗೆ ಚಿತ್ರ ನೋಡ ಹೊರಟ ಅಭಿಮಾನಿ ಪ್ರಭುಗಳಿಗೆ "ದುನಿಯಾ" ಸೂರಿ ಭಾರಿ ನಿರಾಶೆ ಮಾಡಿಬಿಟ್ಟಿದ್ದಾರೆ. ಅಂತೂ "ಜಾಕಿ" ಚಿತ್ರದ ನಂತರದ ಅತಿನಿರೀಕ್ಷೆಯೋ, "ಬಾಂಡ್" ಹೆಸರ ಪ್ರಭಾವವೋ..., "ಅಣ್ಣಾ ಬಾಂಡ್" ಎಲ್ಲವನ್ನು ತಲೆಕೆಳಗು ಮಾಡಿಬಿಟ್ಟಿದೆ...!



ಚಿತ್ರ ಕೃಪೆಃ havyas90downloads

ಚಿತ್ರದ ಸಾರಂಶವಿಷ್ಟೇ: ಸಿನೆಮಾ ಶುರುವಾಗುವುದೇ ಕೆಲವು ವ್ಯಕ್ತಿಗಳು (ರೌಡಿಗಳು ಮತ್ತು ಸಮಾಜಘಾತಕ ಶಕ್ತಿಗಳು) ಹುಚ್ಚರಂತೆ ವರ್ತಿಸುತ್ತ "ಅಣ್ಣಾ ಬಾಂಡ್ ನೋಡ್ತಾಯಿದ್ದಾನೆ, ಕೆಟ್ಟ ಕೆಲಸ ಮಾಡಬೇಡಿ..." ಎಂಬ ಮಾತು ಬಡಬಡಿಸುತ್ತ, ಅಕಾಶ ನೋಡುತ್ತ ನಗರದ ವಿವಿದೆಡೆ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿರುತ್ತಾರೆ. ನಗರ ತುಂಬ ಇದೇ "ಸೆನ್ಸೆಷನ್ ನ್ಯೂಸ್". ಇದೆಲ್ಲದರ ನಡುವೆ ನಮ್ಮ ನಾಯಕ ಬಾಂಡ್ ರವಿ (ಪುನೀತ್) ಮಾರ್ಕೆಟಿನ ತರಕಾರಿ ಕಸದ ನಡುವೆ ಬಿದ್ದಿರುವ ೧೦-೧೫ ಹೆಣಗಳ ಸಾಲಿನಲ್ಲಿ ಕಾಣಿಸುತ್ತಾರೆ ( ಮೊದಲ ಸೀನಿನಲ್ಲೇ ಅವರು ಹೋಗಿಬಿಟ್ಟರಾ ಎಂದು ಅಂದುಕೊಳ್ಳಬೇಡಿ...!!). ಅಲ್ಲಿಂದ ಹೆಣಗಳನ್ನ ಶವಾಗಾರಕ್ಕೆ ಸಾಗಿಸುವ ಪೋಲೀಸರು ತಮ್ಮ ಕಾರ್ಯ ಮುಗಿಸಿ ಹೊರಟಾಗ, ದಗ್ಗನೆ ಏಳುತ್ತಾರೆ ನೋಡಿ ನಮ್ಮ ಬಾಂಡ್..!! ಸೀದ ಏದ್ದವರೆ ರಾಜಕಾರಣಿಯ ಮಗನನ್ನ ಹೊತ್ತೊಯ್ದು "ಚಿತ್ರ-ವಿಚಿತ್ರ" ಕಾಟ ಕೊಟ್ಟು ಸತಾಯಿಸುತ್ತಾರೆ. ಎಲ್ಲ "ಚಾರ್ಲಿ" ಗೋಸ್ಕರ..!! ಅಂತೂ ಇದು "ಚಾರ್ಲಿ" ಹುಡುಕುವ ಕಾರ್ಯ ಎಂದು ಅರಿವಿಗೆ ಬರುವ ಮೊದಲೇ "ಹೀ ಇಸ್ಸ್ ಅಣ್ಣಾ ಬಾಂಡ್" ಹಾಡು ಬಂದಿರುತ್ತದೆ. "ಮೂಳೆಗಾಡಿ" ಯ ಮೇಲೆ ಆಸೀನರಾದ ಅಣ್ಣಾ ಬಾಂಡ್ ನ ಗ್ರಾಫಿಕ್ಸ್ ನ ದೃಶ್ಯವೈಭವ... ( ಗಾಡಿಯ ರಚನೆ ಪ್ರಕೃತಿ ಬನವಾಸಿಯವರದ್ದು). ನಂತರ ದೃಶ್ಯ "ಸದಾ ಸಂಚಾರಿ" ಮನೆಯಲ್ಲಿ ಬಾಂಡ್ ರವಿ ಒಬ್ಬ ನಿರ್ದೇಶಕನ (ನೀನಾಸಂ ಸತೀಶ್) ಹಿಡಿದು ತಂದು ಅವನ ಹತ್ತಿರ ತನ್ನ "ಜೀವನದ ಕಥೆಯನ್ನು" ಸಿನಿಮಾ ಮಾಡುವ ಬಗ್ಗೆ ಹೇಳುತ್ತಾನೆ. ಅಲ್ಲಿಗೆ ಶುರುವಾಗುತ್ತದೆ "ರವಿ" ಬಾಂಡ್ ಆದ ಬಗೆ...

ಚಿತ್ರದ ಮೊದಲಾರ್ಧ ರವಿ "ಮೀರಾ" (ಪ್ರಿಯಮಣಿ) ಳ ಓಲೈಕೆಯಲ್ಲೇ ಕಳೆದುಹೋಗುತ್ತದೆ. ಆಗಲೂ ಪ್ರೇಕ್ಷಕ ಪ್ರಭುವಿಗೆ "ಈ ಚಾರ್ಲಿ ಯಾರು..?" ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅಂತೂ ವಿರಾಮದ ಸಮಯದಲ್ಲಿ ನಮ್ಮ ನಾಯಕನಿಗೆ ತನ್ನ ದೋಸ್ತಿ ಚಪಾತಿ ಬಾಬುವಿನ (ರಂಗಾಯಣ ರಘು) ಜೊತೆ ಸೇರಿ "ದೊಡ್ಡ ಮನುಷ್ಯನಾಗುವ" ಹಂಬಲದೊಂದಿಗೆ ಸಿಟಿ ಕಡೆಗೆ ಪಯಣ ಮಾಡುವ ಹೊತ್ತಿಗೆ ತಾನು ಕೆಲಸ ಮಾಡುತ್ತಿದ್ದ "ಉಳುಕು ಸ್ಪೆಷಲಿಸ್ಟ್" ಅಂಗಡಿಯ ಮಾಲಿಕನ (ವಿ. ಮನೋಹರ್) ಕೊಲೆಯ ಅರೋಪ ತಲೆ ಮೇಲೆ ಬೀಳುತ್ತದೆ. ಅದೇ ಸಮಯದಲ್ಲಿ ಒಬ್ಬ ಸೇನ ಯೋಧ ಇವರನ್ನ ದೂರದ ಪ್ರದೇಶದಲ್ಲಿನ ಮನೆಯೊಂದಕ್ಕೆ ಕರೆದೊಯ್ಯುತ್ತಾನೆ. ಅವನನ್ನು ಪೋಲೀಸನೆಂದೇ ಭಾವಿಸುವ ಇವರು ಮನೆ ತಲುಪಿದಾಗ ತಮ್ಮನ್ನು ಆ ಮನೆಗೆ ಕರೆತಂದ ನಿಜ ವಿಷಯ ಗೊತ್ತಾಗುತ್ತದೆ (ಹಾಗೇ ಪ್ರೇಕ್ಷಕರ ಮುಂದೆ "ಚಾರ್ಲಿ" ಯ (ಜಾಕಿ ಶ್ರಾಫ್) ಕಥೆ ಬಿಚ್ಚಿಕೊಳ್ಳುತ್ತದೆ..)

ಮುಂದೆ "ಚಾರ್ಲಿ" ದ್ವೇಷ, ಮೀರಾಳ ತಂದೆ ಮತ್ತು ಚಾರ್ಲಿಯ ನಡುವೆ ಇರುವ ಸೇಡು, ಮೀರಾಳ ತಂಗಿ ದಿವ್ಯಾ (ನಿಧಿ ಸುಬ್ಬಯ್ಯ) ಗೂ ಚಾರ್ಲಿಗೂ ಇರುವ ಸಂಬಂಧಗಳ ನಡುವೆ ಕಥೆ ಗಿರಕಿ ಹೊಡೆಯುತ್ತದೆ. ಚಿತ್ರದ ಕಥೆ ಒಂದೇ ಏಳೆಯದದಾದರೂ ಬರೀ "ಹಾಡು" ಮತ್ತು "ಫೈಟ್" ಗಳಿಂದ ತುಂಬಿ ಹೋಗಿದೆ. "ಜಾಕಿ" ಚಿತ್ರವನ್ನು ಈ ಚಿತ್ರ ಮೀರುವುದೆಂಬ ನಿರೀಕ್ಷೆ ಹೊತ್ತ ಪ್ರೇಕ್ಷಕ ಪ್ರಭುವಿಗೆ ನಿರಾಸೆಯಾಗುವುದೇ ಇಲ್ಲಿ. ಅದೇ ಏಕತನದ ಸಾಹಿತ್ಯ (ಯೋಗ್ ರಾಜ್ ಭಟ್) ಮತ್ತು ಸಂಗೀತ (ವಿ. ಹರಿಕ್ರಿಷ್ಣ) ಸೂರಿಯವರನ್ನು ಇನ್ನೂ ತಮ್ಮ ಹಿಂದಿನ ಚಿತ್ರಗಳ ಗುಂಗಿನಿಂದ ಹೊರಗೆ ತಂದಿಲ್ಲವೆಂದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ.(ಬಹುಶ: ಅದಕ್ಕೆ ಏನೋ ವಾರದ ಕೊನೆಯ ದಿನ (ಶನಿವಾರ) ವಾದರೂ ಅರ್ಧ ಚಿತ್ರಮಂದಿರ ಸರಿಯಾಗಿ ತುಂಬಿರಲಿಲ್ಲ..!!)

ಕೊನೆಯ ಮಾತು: ಸೂರಿಯವರು ಚಿತ್ರದ ಕತೆಯನ್ನು ಮರೆತು ಕೇವಲ "ಬಾಂಡ್ ವೈಭವದ" ಹಿಂದೆ ಹೊರಟ ಫಲ ಚಿತ್ರದುದ್ದಕ್ಕೂ ಕಾಣುತ್ತದೆ. ಇಬ್ಬರು "ಸುಂದರ ಹೀರೋಯಿನ್" ಗಳಿದ್ದರೂ ಕೇವಲ "ನೆಪ" ಮಾತ್ರದ ಪಾತ್ರವಾಗಿಬಿಟ್ಟಿದ್ದಾರೆ. ಮಿಕ್ಕ ಪಾತ್ರಗಳು ಕೇವಲ "ಬಂದು ಹೋಗುವ" ಮಟ್ಟಕ್ಕಿವೆ. ಚಿತ್ರವೆಲ್ಲಾ "ಪುನೀತ್-ರಘು" ಮಯವೆಂದರೂ ಅಡ್ಡಿಯಿಲ್ಲ. ಜಾಕಿ ಶ್ರಾಫ್ ರ "ಕನ್ನಡ" ತಾಳ್ಮೆಗೆಡಿಸುತ್ತದೆ (ಅವರ ದನಿಗೆ "ದಬ್ಬಿಂಗ್" ಬೇಕಿತ್ತು..). ಅಂತೂ ಒಂದಂತೂ ನಿಜ, ಸತ್ವವಿಲ್ಲದ ಕಥೆ.., ನಿರೀಕ್ಷೆಯ "ಭಾರ"... ಎಲ್ಲಾ ಸೇರಿ ಬಾಂಡ್ ಅನ್ನು "ಅನ್ನ" ವಿಲ್ಲದೆ ಸೊರಗಿಸಿದೆ..!!

Anna bond, puneeth
0 Responses

Post a Comment