ವಿನಯ್ ...
ಅವರಿಬ್ಬರು ಒಂದು ಪುಣ್ಯಭೂಮಿಯಲ್ಲಿ ಹುಟ್ಟಿದ ಸಹೋದರರು....

ಅವರ ಭಾವನೆ, ಗುಣಗಳು... ಎಲ್ಲವು ಒಂದೇ ಆಗಿದ್ದವು....

ಬಿಡಿಸಲಾರದ ಪ್ರೀತಿ ಅವರದು...

ಆದರೆ,

ಅವರಿಬ್ಬರಲ್ಲಿ ತಮ್ಮನಿಗೆ ಸಲ್ಪ ಸಿಡುಕುಬುದ್ಧಿ..

ಇಲ್ಲ-ಸಲ್ಲದವರ ಮಾತನ್ನು ಹೆಚ್ಚು ನಂಬತೊಡಗಿದ...

ನಂತರ ಜೀವಕ್ಕೆ ಜೀವವಾದ ತನ್ನ ಸೋದರನನ್ನು ಬಿಟ್ಟು ಹೊರಟ..

ಅವನ ಪಾಲಿಗೆ ಕಂಟಕನಾಗುತ್ತಾ ಅವನ ಮನೆಗೆ ಕನ್ನ ಕೊರಯಲು ದೂರಾಲೋಚಿಸಿದ...

ಸತತ ಸೋಲುಂಡರೂ ಮತ್ತೆ-ಮತ್ತೆ ಪ್ರಯತ್ನ ಪಟ್ಟ...


.........


ಸಿನಿಮದ ಕಥೆಯಂತಿರುವ ಈ ಮೇಲಿನ ಸಾಲುಗಳು ಇಂದು ನಮ್ಮ ದೇಶವಾದ ಭಾರತ ಮತ್ತು ನಮ್ಮಿಂದಲೇ ಹುಟ್ಟಿಬಂದ ನೆರೆ ರಾಷ್ಟ್ರವಾದ ಪಾಕಿಸ್ಥಾನದ ನಡುವೆ ನೆಡೆಯುತ್ತಿರುವ ನೈಜ ಸ್ಥಿತಿಯ ದೃಶ್ಯ... ಸಿನಿಮಾ ಕೇವಲ ಎರಡುವರೆ ಗಂಟೆಗಳ ಅವಧಿಗೆ ನೆಡೆದರೆ ಈ ಎರಡು ದೇಶಗಳ ನಡುವೆ ನೆಡೆಯುತ್ತಿರುವ ಕಥಾಸಾರಾಂಶ ೬೩ ವರ್ಷಗಳಾದರೂ ನಿಲ್ಲುವ ಸೂಚನೆ ಇಲ್ಲ...! ಇಂಡಿಯನ್ ಇಂಡಿಪೆಂಡೆಂಸ್ ಆಕ್ಟ್ ೧೯೪೭ ರ ಮುಖಂತರ ಅಧಿಕೃತವಾಗಿ ವಿಭಾಜನೆಗೊಂಡ ಭಾರತ-ಪಾಕ್ ನಂತರ ಸರಿಸುಮಾರು ೫೦೦,೦೦೦ ರಿಂದ ೧,೦೦೦,೦೦೦ ಸಾವುಗಳ ನಡುವೆ ಇಲ್ಲಿನ ಮತ್ತು ಅಲ್ಲಿನ ಜನರು ತಮ್ಮ ಮೂಲನೆಲೆ ಕಳೆದುಕೊಂಡು ಬೇರೆಡೆ ಬಂದು ಇರುವಂತಾಯಿತು.

ದೇಶ ವಿಭಾಜನೆಯಾದರೂ ಇನ್ನೂ ಕಾಶ್ಮೀರ ಹಾಗೇ ಉಳಿದಿತ್ತು. ಅಲ್ಲಿ ಅನೇಕ ಮುಸ್ಲಿಮ್ ಬಾಂಧವರು ಮತ್ತು ಹಿಂದು ಬಾಂಧವರು ಸಮರಸದಿಂದ ಬಾಳ್ವೆ ಮಾಡುತ್ತಿದ್ದರು. ಪಂಜಾಬಿನ ಬಹುತೇಕ ಭಾಗವನ್ನು ಭಾರತ ವಿಭಾಜನೆಯಲ್ಲಿ ಕಳೆದುಕೊಂದರೂ ಕಾಶ್ಮೀರದ ಮೇಲಿಟ್ಟಿದ್ದ ಕಣ್ಣನ್ನು ಪಾಕ್ ಇನ್ನೂ ತಗೆದಿರಲಿಲ್ಲ... ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಕಾಶ್ಮೀರದ ರಾಜಸಂಸ್ಥಾನದವರು ಭಾರತದೊಡನೆ ಸೇರಲು ಇಶ್ಚಿಸಿದಾಗ ಅರಂಭವಾದ ಕಾಶ್ಮೀರ ಕದನ ಅಂದಿನಿಂದ ಇನ್ನೂ ಹಾಗೆ ಎಡಬಿಡದೆ ಮುಂದುವರಿದಿದೆ...

೮೦ ರ ನಂತರದ ದಶಕದವರೆಗೂ ಬೂದಿ ಮುಚ್ಚಿದ ಕೆಂಡಂತಿದ್ದ ಎರಡು ದೇಶಗಳ ನಡುವಿನ ವಾತಾವರಣ ೮೫ ರ ಹತ್ತಿರ ಬರುತ್ತಿದ್ದಂತೆ ಕಾಶ್ಮೀರ ಕಣುವೆಯ ಸೀಮಾಲೋನ್ಘನೆ ಮುಖಂತರ ಇನ್ನಷ್ಟು ಬಿಗಡಾಯಿಸತೊಡಗಿತು. ನೆರೆಯ ರಾಷ್ಟ್ರದ ಮೇಲಿನ ಗೂಮಾನಿ ಆಗಾಗ ಕಾಡುತ್ತಿದ್ದರೂ ಅದು ಆಗಷ್ಟೆ ಅಫ್ಘಾನಿಸ್ಥಾನ್ ಯುದ್ಧ ಮುಗಿಸಿದ್ದ ಮುಜಾಹಿದ್ದೀನ್ ಯೋಧರ ಕಾಶ್ಮೀರ ಗಡಿಯೊಳಗಿನ ನುಸುಳುವಿಕೆಯೊಂದಿಗೆ ತಾರಕವೇರತೊಡಗಿತು. ಇದರೊಂದಿಗೆ ಪ್ರತ್ಯೇಕತವಾದಿಗಳ ಸಮಾಗಮ ಅದಕ್ಕೆ ಇನ್ನಷ್ಟು ಬಲ ದೊರಕಿಸಿತು.

ಜಮ್ಮು ಕಾಶ್ಮೀರ ಅಸ್ಸೆಂಬ್ಲಿಯ ಅಧಿಕೃತ ಮಾಹಿತಿ ಪ್ರಕಾರ ಇವರೆಗೂ (ಜುಲೈ ೨೦೦೯ ರ ತನಕ...) ಸರಿಸುಮಾರು ೩,೪೦೦ ಕಾಣೆಯಾಗಿರುವ ಪ್ರಕರಣ ಮತ್ತು ೪೭,೦೦೦ ಜನರ ಸಾವು ಸಂಭವಿಸಿವೆ ಎಂದು ಹೇಳಿದೆ. (ಹೆಚ್ಚಿನ ಮಾಹಿತಿ: http://en.wikipedia.org/wiki/Jammu_and_Kashmir ರಲ್ಲಿ ಇದೆ...). ಭೂಲೋಕದ ಸ್ವರ್ಗದಂತಿರುವ ಕಾಶ್ಮೀರವು ಹೆಚ್ಚು-ಕಮ್ಮಿ ಆ ಕಾಲದಿಂದ ತನ್ನ ನೆಮ್ಮದಿ ಕಳೆದುಕೊಳ್ಳತೊಡಗಿತು. ಹಲವಾರು ಸಾವು-ನೋವುಗಳು ಈ ಕಣವೆಯ ಮುಖ್ಯಭಾಗವಾಗತೊಡಗಿದವು.

ನಮ್ಮ ಜನ ಹಾಗೂ ಪಾಕ್ ನ ಸಹೃದಯ ಬಂಧುಗಳು ಇವೆಲ್ಲಾ ಬಯಸದಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಜಾಹಿದ್ದೀನ್ ಮತ್ತು ಪ್ರತ್ಯೇಕತವಾದಿಗಳ ಹೂಡಿರುವ ತಂತ್ರ ಇವರಿಬ್ಬರ ನಡುವಿನಲ್ಲಿ ಬಹುದೊಡ್ಡ ಕಂದಕ ಸೃಷ್ಠಿಸಿದೆ. ಎರಡು ಗಡಿಗಳ ನಡುವೆ ನೆಡೆಯುತ್ತಿದ್ದ ವ್ಯಾಪಾರ ವಹಿವಾಟಿಗೆ ಇದು ಭಾರಿ ದಕ್ಕೆ ತಂದಿದ್ದರೂ ಇನ್ನೂ ಸಂಸ್ಕೃತಿಕ ಮತ್ತು ಕ್ರೀಡೆಯ ದಿಕ್ಕಿನಲ್ಲಿ ನೋಡಿದರೆ ಭಾರಿ ಬದಲಾವಣೆಯೇನೂ ಆಗಿಲ್ಲ. ವೀಸಾ ತೊಂದರೆ, ಪರಸ್ಪರ ವಿಚಾರವಿನಿಮಯಗಳಲ್ಲಿನ ತೊಂದರೆ, ಸಮರ್ಪಕ ಮಾಹಿತಿ ವಿನಿಮಯ ಇಲ್ಲದಿರುವುದು ಈ ಎರಡು ದೇಶದಲ್ಲಿರುವ ಪ್ರಜೆಗಳಿಗೆ ವಿನ:ಕಾರಣ ತೊಂದರೆ ಅನುಭವಿಸುವಂತೆ ಮಾಡುತ್ತಿವೆ. ಕ್ರೀಡಾ ಕಾರ್ಯಕ್ರಮಗಳು ರದ್ದಾಗುವುದು, ಸಂಸ್ಕೃತಿಕ ಕಾರ್ಯಕ್ರಮ ನೆಡೆಸುವುದಕ್ಕೆ ಪರವಾನಿಗೆ ಸಿಗದಿರುವುದು ಎಲ್ಲಾ ಇದರ ಕಾರಣವೆನ್ನಬಹುದು...

ನಾವು ಎರಡು ದೇಶಗಳ ಪ್ರಜೆಗಳ ವಿಷಯ ಬಿಟ್ಟು ಯೋಚಿಸತೊಡಗಿದರೆ ನಮಗೆ ಕಾಡುವ ಮತ್ತೊಂದು ವಿಚಾರ: ಭಯೋತ್ಪಾದನೆ. ದೇಶವಿಭಾಜನೆಯಾದ ನಂತರ ೧೯೪೭-೪೮, ೧೯೬೫ ಮತ್ತು ೧೯೭೧ ರಲ್ಲಿ ಕದನವೆರ್ಪಟ್ಟರೂ, ಜನರ ಮನಸ್ಸಿನಲ್ಲಿ ನಿರಂತರ ಭಯ ಮೂಡಿಸಲು ಭಯೋತ್ಪಾದನೆ ಎಂಬ "ಭೂತ" ಮತ್ತಷ್ಟು ಸಹಕರಿಸಿದೆ. ದೇಶದ ಅಂತರಿಕ ಭದ್ರತೆ, ವ್ಯಾಪಾರ-ಹಣಕಾಸು ಕಾರ್ಯಗಳಲ್ಲಿ ಏರು-ಪೇರು ಮಾಡಲು ಭಯೋತ್ಪಾದನ ಗುಂಪುಗಳು ಮತ್ತು ಅದರ "ಮಾಲೀಕರು" ಬಹಳಷ್ಟು ಶ್ರಮಿಸುತ್ತಲೇ ಇದ್ದಾರೆ. ಕಾಶ್ಮೀರದಿಂದ ಪ್ರಾರಂಭವಾದ ಈ "ಕಾರ್ಯ" ನಂತರ ವ್ಯವಸ್ಥಿತವಾಗಿ ಭಾರತ ದೇಶದೊಳಗೆಲ್ಲಾ ಹರಡುವಂತೆ ಮಾಡುವಲ್ಲಿ ಕೆಲಮಟ್ಟಿನ ಸಫಲತೆ ಈ ಭಯೋತ್ಪಾದನ ಸಂಘಟನೆಗಳು ಪಡೆದವು. ನಮ್ಮ ರಾಷ್ಟ್ರದ ಯುವಕರನ್ನೇ ಅಲ್ಲಿಗೆ ಕರೆದುಕೊಂಡು ಹೋಗಿ, ಯುದ್ಧ ತರಬೇತಿ ನೀಡಿ ಮತ್ತೆ ನಮ್ಮಲ್ಲಿಗೆ ಕಳುಹಿಸಿ, ನಮ್ಮ ಜನರನ್ನೇ ಸಾಯಿಸುವ "ಷಡ್ಯಂತ್ರ"...! ಎಂತಹ ದುರಾದೃಷ್ಟ ನೋಡಿ ನಮ್ಮ ತಾಯಿ ಭಾರತಮಾತೆಗೆ. ತನ್ನದೇ ಭಾಗವಾಗಿದ್ದ ನೆರೆರಾಷ್ಟ್ರದ "ಗುಂಪುಗಳು" ತನಗೆ ಬೆಂಕಿಯಿಡಲು ಬರುತ್ತಿರುವುದು ಭಾರತಕ್ಕೆ ಸಿಕ್ಕ ಶಾಪವೆನ್ನಬಹುದು.

ನಮ್ಮ ದೇಶದ ಸುರಕ್ಷತ ವ್ಯವಸ್ಥೆ ಎಷ್ಟೇ ಬಿಗಿಯಾಗಿದ್ದರೂ ಹಲವು "ಮೂಲ" ಗಳನ್ನು ಹೊಂದಿರುವ ಈ "ಗುಂಪುಗಳು" ಎಂತಹ ಚತುರತೆಯಿಂದ ಕಾರ್ಯನಿರ್ವಹಿಸುತ್ತಿದೆ ಅಂದರೆ ವರ್ಷದ ಹಿಂದೆ ನೆಡೆದ ಮುಂಬಯಿ ಉಗ್ರರ ಅಟ್ಟಹಾಸ ಮತ್ತು ಇತ್ತೀಚಿಗಿನ ಪುಣೆ ಬಾಂಬ್ ಸ್ಪೋಟಗಳೇ ಉದಾಹರಣೆ. ಮುಂಬಯಿ ಉಗ್ರರ ಅಟ್ಟಹಾಸವಂತೂ ಕೆಲವು ವರ್ಷಗಳ "ಪ್ಲಾನಿಂಗ್" ಯೊಂದಿಗೆ ಒಂದು ಬಹಳ ರಹಸ್ಯಮಯ ಕಾರ್ಯಚರಣೆಯೂ ಸಹ ಆಗಿತ್ತು. ನಮ್ಮಲ್ಲಿನ ಎನ್.ಎಸ್.ಜಿ ಕಾಮಾಂಡೋಗಳಿಗಿದ್ದ ಜಾಗದ ಮಾಹಿತಿಗಿಂತ ಹೆಚ್ಚು ಮಾಹಿತಿ ಅವರ ಬಳಿ ಅಂದು ಇತ್ತು. ಅದರ ಸಹಾಯದಿಂದ "ಕಂಟ್ರೋಲರ್ಸ್" ಹೇಗೆ ಕಾರ್ಯನಿರ್ವಹಿಸಿದೆಂದರೆ ಅವರು ಮಾಡಿದ "ಸಂಶೋಧನೆ" ಬಗ್ಗೆ ನೀವೇ ಒಮ್ಮೆ ಯೋಚಿಸಿ...!!!.


ದಿಗಿಲಾಗುತ್ತದೆಯಲ್ಲವೇ...?


ನಮ್ಮ ಭಾರತದ ಬಳಿ ಎಂತಹ ಶಕ್ತಿಯಿದ್ದರೂ "ಹೊರ ದೇಶ" ಗಳ "ಒತ್ತಡ" ದಿಂದ ಪ್ರತಿಕಾರ್ಯಚರಣೆ ಮಾಡದೆ ಸುಮ್ಮನಿರಬೇಕಾಗಿದೆ. ಇದರಿಂದ ನಮ್ಮ ಜನ ಇನ್ನಷ್ಟು ಸಾವು-ನೋವುಗಳನ್ನ ನೋಡಬೇಕಾಗಿದೆ.... ಬಾಂಧವ್ಯದ ಬಗ್ಗೆ ಅಲ್ಲದಿದ್ದರೂ ದೇಶ ರಕ್ಷಣೆಗೋಸ್ಕರವಾದರೂ ನಮ್ಮ ಭಾರತವು ಎಂದು ತಿರುಗಿ ಉತ್ತರಕೊಡುವುದೋ ಎಂಬುದು ಆ ಕಾಲವೇ ನಿರ್ಣಯಿಸಬೇಕು...! ಏಕೆಂದರೆ ದೂರದ ಅಫ್ಘಾನಿಸ್ಥಾನದಲ್ಲಿ ನೆಡೆದ ಸಂಚಿಗೆ ಅಮೆರಿಕ ಭೂಮಿ ಕದುಲಿದಾಗ ಅವರು "ತಾಲಿಬಾನಿ"ಗಳನ್ನು ಮೆಟ್ಟಿ ನಿಂತಂತೆ ನಾವು ನಮ್ಮ ನೆರೆಯ ದೇಶದಲ್ಲಿ ಬೀಡು ಬಿಟ್ಟಿರುವ ಆ "ಗುಂಪುಗಳ" ವಿರುದ್ಧ ಕಾರ್ಯಚರಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಅಲ್ಲಿಯವರೆಗೂ ನಾವೆಲ್ಲ ಇನ್ನೆಷ್ಟು ದಿನ ಭೀತಿಯ ನೆರಳಿನಲ್ಲಿ ಇರಬೇಕೋ ಆ ದೇವರೇ ಬಲ್ಲ...!!
ವಿಭಾಗ: edit post
0 Responses

Post a Comment