ವಿನಯ್ ...
೧೯೩೪ ರ ಟಾಕಿ ಚಿತ್ರ "ಸತಿ ಸುಲೋಚನ" ಚಿತ್ರದಿಂದ ಪ್ರಾರಂಭವಾದ ನಮ್ಮ ಕನ್ನಡ ಚಿತ್ರರಂಗದ ಪಯಣ ಹಲವು ಏಳು- ಬೀಳುಗಳ ನಡುವೆ ೭೫ ವರ್ಷಗಳ ಮೈಲಿಗಲ್ಲು ದಾಟಿಬಿಟ್ಟಿದೆ. ಅಂದು ಸಿನೆಮಾ ತಂದ ಕುತೂಹಲ, ಇಂದು ಅದ್ಭುತ ತಂತ್ರಜ್ಞಾನದ ಜೊತೆಯೊಂದಿಗೆ ಪ್ರೇಕ್ಷಕರ ಮನ ತಣಿಸುತಿದೆ. ಅದರೆ ಇತ್ತೀಚಿಗಿನ ದಿನಗಳಲ್ಲಿ ನಮಗೆ ಕಾಣುತಿರುವ ದೃಶ್ಯ ನಿಜಕ್ಕೂ ನಮ್ಮಲ್ಲೇ ಒಂದು ಪ್ರಶ್ನೆ ಮೂಡಿಸದೇ ಇರದು, ಅದುವೇ... "ನಮ್ಮ ಕನ್ನಡ ಚಿತ್ರರಂಗ ಎತ್ತ ಸಾಗುತಿದೆ...?"

೧೯೩೪ ರಿಂದ ೫೦ ರ ದಶಕದಲ್ಲಿ ಹಲವು ವಾಕ್ ಚಿತ್ರಗಳು ನಿರ್ಮಾಣಗೊಂಡು ಪ್ರದರ್ಶಿಸಲ್ಪಟ್ಟರೂ, ಚಿತ್ರರಂಗದ ನಿಜವಾದ ಸುವರ್ಣ ಪರ್ವ ಪ್ರಾರಂಭಗೊಂಡಿದ್ದೇ ೧೯೫೦ ರಲ್ಲಿ. ಗುಬ್ಬಿ ವೀರಣ್ಣನವರ ಕಂಪನಿ ಸೇರಿದಂತೆ ಕೆಲವು ಕಂಪನಿಗಳಲ್ಲಿ ತಮ್ಮ ನಾಟಕಗಳಿಂದಲೇ ಹೆಸರು ಪಡೆದಿದ್ದ "ಮುತ್ತುರಾಜ್", ಎಚ್,ಎಲ್.ಎನ್ ಸಿಂಹ ರವರ "ಬೇಡರ ಕಣ್ಣಪ್ಪ" ಚಿತ್ರದ ಮುಖಾಂತರ "ರಾಜ್ ಕುಮಾರ್" ಆಗಿ ಚಿತ್ರರಂಗದಲ್ಲಿ ಕಾಲಿಟ್ಟ ವರ್ಷ ವದು. ಕನ್ನಡದ "ನಟಸಾರ್ವಭೌಮ" ನ ಚಿತ್ರರಸಿಕರ ಹೃದಯ ಸಿಂಹಾಸನರೋಹಣದ ಶುಭ ಕಾಲ.

ನರಸಿಂಹರಾಜು ಮತ್ತು ಜಿ.ವಿ ಐಯ್ಯರ್ ರವರು ಪಾದಾರ್ಪಣೆ ಮಾಡಿದ್ದ ಈ ಸಿನೆಮಾದಲ್ಲಿ ಅಂದು "ಉದ್ದ ಮೂಗಿನ" (ಇದನ್ನು ಎಚ್,ಎಲ್.ಎನ್ ಸಿಂಹ ರವರೇ ರಾಜ್ ರವರನ್ನು ಮೊದಲು ನೋಡಿದಾಗ ಹೇಳಿದ್ದರಂತೆ...!, "ಉಬ್ಬು ಹಲ್ಲು" ಎಂದು ನರಸಿಂಹರಾಜು ಅವರಿಗೆ...!) ಯುವಕ ತನ್ನ ಅಭಿನಯದಿಂದಲೇ ಮುಂದೆ ಎಲ್ಲರ "ಮುತ್ತಿನ ರಾಜ" ನಾಗುವನೆಂಬ ಕನಸು ಸ್ವತ: ಸಿಂಹರವರೇ ಕಂಡಿರಲಿಲ್ಲವೇನೋ...! ಈ ಚಿತ್ರ ಅಂದು ಯಶಸ್ವಿ ಪ್ರದರ್ಶನ ಕಾಣುವುದೊಂದಿಗೆ ನವ "ತಾರೆ" ಯ ಜನನವಾಗಿತ್ತು.

ಮುಂದೆ ಹಲವು ಚಿತ್ರಗಳು ಬಂದಿದ್ದರೂ ನಿರ್ಮಾಣದ ಪ್ರಮಾಣ ಅಷ್ಟು ಏರುಗತಿಯಲ್ಲೂ ಸಹ ಇರಲಿಲ್ಲ... ಕಾರಣ: ನಮ್ಮ ಚಿತ್ರಗಳಿಗೆ ಬಂಡವಾಳ ಹೂಡಿಕೆ, ತಂತ್ರಜ್ಞಾರ ಸಹಾಯ, ನಿರ್ಮಾಣ ಸಲಕರಣೆ ನಮ್ಮ ನಾಡಿನಲ್ಲಿ ಹೆಚ್ಚಾಗಿ ದೊರೆಯದೇ ದೂರದ ಮದರಾಸಿನಲ್ಲಿ (ಈಗಿನ ಚೆನ್ನೈ...) ನಲ್ಲಿ ಚಿತ್ರ ನಿರ್ಮಾಣ ಮಾಡುವಂತಾಯಿತು. ಇದರ ಕಾರಣದಿಂದಲೇ ನಮ್ಮ ಹಲವು ನಟರು ಮತ್ತು ನಿರ್ದೇಶಕರು, ಚಿತ್ರ ಉದ್ಯಮದವರು ಮದರಾಸನ್ನೇ ತಮ್ಮ ವಾಸಸ್ಥಾನವಾಗಿ ಮಾಡಿಕೊಂಡಿದ್ದರು. ಎಲ್ಲಾ "ಮದರಾಸ್" ಅವಲಂಬನೆ ಯಾಗುತ್ತಿದ್ದ ಹೊತ್ತಿನಲ್ಲೇ ಐಯ್ಯರ್, ರಾಜ್ ಮತ್ತು ನರಸಿಂಹರಾಜು ಮುಂತಾದವರು ಇದನ್ನ ಮನಗೊಂಡು ತಮ್ಮ ಸ್ನೇಹಿತರ ಜೊತೆಗೂಡಿ "ರಣಧೀರ ಕಂಠೀರವ" ಚಿತ್ರ ಮಾಡಿ ಅದರಲ್ಲಿ ಯಶಸ್ಸು ಪಡೆದಾಗಲೇ ಕನ್ನಡ ಚಿತ್ರ "ಮದರಾಸ್" ನ ಬಂಧನದಿಂದ ಕಳುಚಿ ಬಂದು ಕಾರುನಾಡಿನಲ್ಲಿ ಸ್ಥಾಪಿತವಾದದ್ದು....

ನಂತರ ಹಲವು ದಶಕಗಳ ಕಾಲ ರಾಜ್ ಕುಮಾರ್ ಕನ್ನದ ಚಿತ್ರರಂಗವನ್ನು ಆಳಿದರೂ, ಇವರ ಜೊತೆ ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಪಂಡರಿ ಬಾಯಿ, ಲೀಲಾವತಿ, ಸರೋಜದೇವಿ ಹಾಗೂ ಇತರ ನಟ/ನಟಿಯರು ಸಹ ತಮ್ಮ ಚಾಪನ್ನು ಕನ್ನಡ ಚಿತ್ರಜಗತ್ತಿನ ಮೇಲೆ ಮೂಡಿಸಿದರು. ಖಳ ನಟನೆಯಿಂದಲೇ ಪ್ರಸಿದ್ದರಾದ ವಜ್ರಮುನಿ, ತೂಗುದೀಪ ಶ್ರೀನಿವಾಸ್ ಮತ್ತು ದಿನೇಶ್ ರವರು ಸಹ ಇದೇ ಸಮಯದಲ್ಲೇ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಕನ್ನಡ ಚಿತ್ರ ರಸಿಕರಿಗೂ ಸಹ ಇದರಿಂದ ಹಲವು ಸದಭಿರುಚಿಯ ಚಿತ್ರಗಳು ನೋಡಲು ದೊರೆತವು. ಇವರೆಲ್ಲರ ಜೊತೆ ಕನ್ನದ ಸಿನೆಮದಲ್ಲಿ ತೆರೆಯ ಹಿಂದಿನ ಜನರ ಕೊಡುಗೆ ಸಹ ಬಹಳವಿತ್ತು. ಕು.ರಾ.ಸೀ ಇವರೆಲರಲ್ಲಿ ಮೊದಲಿಗರು. ಅವರು ಉತ್ತಮ ನಿರ್ದೇಶಕರು ಅಲ್ಲದೇ ಉತ್ತಮ ಗೀತೆ ರಚನಕಾರರು, ಚಿತ್ರಕಥೆ ಮತ್ತು ಅದಕ್ಕೆ ಸಂಬಂಧಿಸಿದ್ದ ಹಲವು ಕೆಲಸದಲ್ಲಿ ಎತ್ತಿದ ಕೈ. ಇವರು ಚಿತ್ರಜಗತ್ತಿಗೆ ಹಲವು ಖ್ಯಾತನಮರ ಅಗಮನಕ್ಕೂ ಸಹ ಕಾರಣರಾಗಿದ್ದರು. ಕನ್ನಡ ಚಿತ್ರಗಳಲ್ಲದೇ ದೂರದ ಮಲಯ ಚಿತ್ರ ನಿರ್ದೇಶಿಸಿ ಅಂತರ್ ರಾಷ್ಟ್ರೀಯ ಪ್ರಶಸ್ತಿ ಸಹ ಪಡೆದಿದ್ದರು.

ರಾಜ್ ರವರ ಸದಾಭಿರುಚಿ ಚಿತ್ರಗಳು ೭೦ ರ ದಶಕದ ವರೆಗೂ ಹೆಚ್ಚಾಗಿ ಬರುತ್ತಿರಲು, ಅವರು ಜನರ ಮನದಲ್ಲಿ ಸ್ಥಾಪಿತವಾಗುತ್ತಾ ಹೋದರು. ಈ ನಡುವೆ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಓಬ್ಬರಾದ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ಮತ್ತು ಅಮರನಾಥ್ ರವರನ್ನು "ವಿಷ್ಣುವರ್ಧನ್" ಮತ್ತು "ಅಂಬರೀಷ್" ಆಗಿ "ನಾಗರಹಾವು" ಚಿತ್ರದಲ್ಲಿ ೧೯೭೨ ರಲ್ಲಿ ಪರಿಚಯಿಸುವುದರೊಂದಿಗೆ ರಾಜ್ ಗೆ ಪ್ರತಿಸ್ಪರ್ಧಿಗಳು ಹುಟ್ಟಿದರು! "ನಾಗರಹಾವು" ವಿನ "ರಾಮಚಾರಿ" ಯ ಪಾತ್ರಕ್ಕೆ ಜನರು ಅಷ್ಟು ಮರುಳಾಗಿದ್ದರೆಂದರೆ ಆ ಚಿತ್ರ ತೆರೆಕಂಡ ಚಿತ್ರಮಂದಿರಗಳಲ್ಲಿ ದಾಖಲೆ ಪ್ರದರ್ಶನವನ್ನೇ ಕಂಡವು. ಅಂದು ಆ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದ ಅಂಬರೀಷ್ ರವರು ಮುಂದೆ "ರೆಬೆಲ್ ಸ್ಟಾರ್" ಆಗಿ ಪ್ರಸಿದ್ಧಿಯಾಗಿದ್ದು ಇತಿಹಾಸ. ಪುಟ್ಟಣ್ಣ ಕಣಗಾಲ್ ರವರು ಇತರ ಪ್ರಸಿದ್ಧ ನಟರಾದ ರಾಮಕೃಷ್ಣ, ಶ್ರೀಧರ್, ಪದ್ಮ ವಾಸಂತಿ ಮುಂತಾದವರನ್ನು ಸಹ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದರು...

೮೦ ರ ದಶಕದ ಮತ್ತೊಂದು ನೆನಪಿಡಬೇಕಾದ ಹೆಸರು ಶಂಕರ್ ನಾಗ್, ಮೂಲತ: ಕನ್ನಡದ ಕರಾವಳಿ ಕ್ಷೇತ್ರದಿಂದ ಬಂದ ಶಂಕರ್ ತಮ್ಮ ವಿದ್ಯಾಭ್ಯಾಸ/ಕಾರ್ಯಕ್ಷೇತ್ರ ಮುಂಬೈ ಮಾಡಿಕೊಂಡಿದ್ದರೂ ನಂತರ ತಮ್ಮ ಅಣ್ಣ ಅನಂತ್ ನಾಗ್ ರವರೊಟ್ಟಿಗೆ ಕನ್ನಡದ ಚಿತ್ರರಂಗದಲ್ಲಿ ನೆನಪಿನಲ್ಲಿಯುಳಿಯುವ ಕಾರ್ಯ ಮಾಡಿದರು. ಅನಂತ್ ನಾಗ್ ಶಂಕರ್ ರವರಿಗಿಂತ ಮೊದಲೇ ಬಹಳ ಪ್ರಸಿದ್ಧಿಯನ್ನು ಪಡೆದಿದ್ದರು. ಶಂಕರ್ ಮುಂಬೈಯಲ್ಲಿ ನಾಟಕವಾಡುತ್ತಿದ್ದಾಗಲೇ ಗಿರೀಶ್ ಕಾರ್ನಾಡರ ಅಹ್ವಾನದಿಂದ "ಒಂದಾನೊಂದು ಕಾಲದಲ್ಲಿ" ಚಿತ್ರದಲ್ಲಿ ನಟಿಸಿ ಮೊದಲ ಯತ್ನದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಸಂಚಲನ ಮೂಡಿಸಿದ್ದರು. ಚಿತ್ರದ ತಾಂತ್ರಿಕತೆಯ ಕಡೆಗೆ ಹೆಚ್ಚು ಗಮನ ಹರಿಸಿದ್ದ ಶಂಕರ್ ಅದನ್ನು ಇನ್ನೂ ಹೆಚ್ಚು ಉತ್ತಮಪಡಿಸಲು "ಸಂಕೇತ್ ಸ್ಟುಡಿಯೋ" ಅನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು. ಆ ಕಾಲದಲ್ಲಿ ಈ ಸ್ಟುಡಿಯೋ ಬಹಳ ಹೆಸರು ಪಡೆದಿತ್ತು ಸಹ.. ಕೆಲವು ಉತ್ತಮ ಚಿತ್ರಗಳನ್ನು ಕನ್ನಡ ಜನತೆಗೆ ನೀಡಿದ್ದ ಶಂಕರ್ ತಮ್ಮ ಪೂರ್ಣ ಪ್ರಭೆ ಬೀರುವ ಮೊದಲೇ ೧೯೯೦ ರಲ್ಲಿ ನಮ್ಮನೆಲ್ಲ ಬಿಟ್ಟು ಕಲಾದೇವಿಯಲ್ಲಿ ಲೀನವಾಗಿಹೋದರು.

೭೦ ಮತ್ತು ೮೦ ರ ಸಾಲಿನಲ್ಲಿ ಬಂದ ಹಲವು ಚಿತ್ರಗಳು ಗೆಲ್ಲಲು ಸಾಧ್ಯವಾಗಿಸಿದ್ದು ಆ ಚಿತ್ರಗಳ ಮಧುರ ಸಂಗೀತ... ನಾವು ಇಲ್ಲಿ ನೆನೆಯಬೇಕಾಗಿದ್ದು ಚಿತ್ರಬ್ರಹ್ಮ "ಚಿ. ಉದಯಶಂಕರ" ರವರನ್ನು. ಡಾ|| ರಾಜ್ ಚಿತ್ರಗಳ ಬೆನ್ನೆಲುಬು ಆಗಿದ್ದ ಅವರು ಸಂಭಾಷಣೆ ಮಾತ್ರವಲ್ಲದೇ ಹಾಡುಗಳನ್ನು ಸಹ ಬರೆಯುತ್ತಿದ್ದರು. ಅವರ ಹಾಡು ಮತ್ತು ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಎಂ. ರಂಗರಾವ್ ಮುಂತಾದ ಹಲವು ಸಂಗೀತಗಾರರ ಬಲದಿಂದ ಕನ್ನಡ ಚಿತ್ರಜಗತ್ತು ಎಂದೂ ಮರೆಯದ ಹಾಡುಗಳನ್ನ ತನ್ನ ಭಂಡಾರದಲ್ಲಿ ಪಡೆದಿದೆ

ಶಂಕರ್ ಬಂದ ಸಮಯದಲೇ ದೇವರಾಜ್, ಜಗ್ಗೇಶ್, ಅವಿನಾಶ್ ರಂತಹ ನಟರು ತಮ್ಮ ಪಾತ್ರಗಳಿಂದ ಗಮನಸೆಳೆದಿದ್ದರು. ಇದರಲ್ಲೂ ರವಿ ಮತ್ತು ಹಂಸಲೇಖರ ಜೋಡಿ "ಪ್ರೇಮ ಲೋಕ" ಮತ್ತು "ರಣಧೀರ" ಮುಂತಾದ ಚಿತ್ರಗಳಿಂದ ಯುವ ಜನರ ಮನಸ್ಸಿಗೆ ಕಿಚ್ಚು ಹಿಡಿಸಿದ್ದರು. ರವಿಯವರ "ಕನಸು" ಮತ್ತು ಹಂಸ್ ರವರ "ಗಾನ" ಕನ್ನಡ ಚಿತ್ರರಂಗದಲ್ಲಿ "ಅದ್ಭುತ ಮಾಯಲೋಕ" ವನ್ನೇ ಸೃಷ್ಠಿ ಮಾಡಿತ್ತು. ಇವರಿಬ್ಬರಲ್ಲದೇ ನಿರ್ದೇಶಕರಾಗಿ ಕಾಲಿಟ್ಟ ರಾಜೇಂದ್ರಸಿಂಗ್ ಬಾಬು, ರಾಜೇಂದ್ರ ಬಾಬು, ನಾಗಭರಣ, ಗಿರೀಶ್ ಕಾಸರವಳ್ಳಿ, ದಿನೇಶ್ ಬಾಬು ಸಹ ಪ್ರಮುಖರು. ಗಿರೀಶ್ ಕಾಸರವಳ್ಳಿ ತಮ್ಮ ವಿಭಿನ್ನ ರೀತಿಯ ಚಿತ್ರಗಳಿಂದ ಪ್ರಸಿದ್ಧರಾದರಲ್ಲದೇ ಹಲವಾರು ರಾಷ್ಟ್ರಪ್ರಶಸ್ತಿಗಳನ್ನು ಸಹ ಪಡೆದರು. ಹಲವು ನವ ನಟರ/ನಟಿಯರ ಅಗಮನಕ್ಕೆ ದಾರಿ ಕೊಟ್ಟ ಈ ದಶಕ "ಕನಸಿನ ರಾಣಿ" ಮಾಲಾಶ್ರೀ ರವರನ್ನು ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರನ್ನು "ನಂಜುಂಡಿ ಕಲ್ಯಾಣ" ಚಿತ್ರದ ಮೂಲಕ ಚಿತ್ರಲೋಕಕ್ಕೆ ಕಾಲಿರಿಸುವಂತೆ ಮಾಡಿದವು.

೮೦ ರ ದಶಕದಲ್ಲಿ ಇನ್ನೊಂದು ಪ್ರಸಿದ್ಧಿಯಾದ ಹೆಸರು ಶಿವರಾಜ್ ಕುಮಾರ್. "ಅನಂದ್" ಚಿತ್ರದಲ್ಲಿ ಸುಧಾ ರಾಣಿ ಯವರೊಂದಿಗೆ ಪದಾರ್ಪಣೆ ಮಾಡಿದ ಶಿವು, ಮುಂದೆ ಅವರ ೨ನೇ ಮತ್ತೆ ೨ನೇ ಚಿತ್ರ ’ರಥಸಪ್ತಮಿ’ ’ಮನ ಮೆಚ್ಚಿದ ಹುಡುಗಿ’ ಬಾಕ್ಸ್ ಆಫೀಸ್ ಗೆಲವು ಕಂಡಾಗ "ಹ್ಯಾಟ್ರಿಕ್ ಹೀರೋ" ಆಗಿಬಿಟ್ಟರು. ತಮ್ಮ ತಂದೆ ಡಾ|| ರಾಜ್ ಅವರ ನೆರಳಿನಲ್ಲಿ ನೆಡೆಯದೆ ತಮ್ಮದೇ ವಿಭಿನ್ನ ಅಭಿನಯ ಕೌಶಲ್ಯದಿಂದ ಅನೇಕ ಅಭಿಮಾನಿಗಳನ್ನು ಇಂದು ಪಡೆದಿದ್ದಾರೆ. ಸುನೀಲ್ ಅವರಂತಹ ನಟರು ಸಹ ಇದೇ ಸಮಯದಲ್ಲಿ ಚಿತ್ರರಂಗಕ್ಕೆ ಅಗಮಿಸಿದ್ದರು. ಭರವಸೆ ಮೂಡಿಸಿದ ನಟರು ಕೂಡ ಅಗಿದ್ದ ಅವರು ನಮ್ಮ ಕನ್ನಡದ ಪ್ರೇಕ್ಷಕರಿಗೆ ತಮ್ಮ ಅಭಿನಯದಿಂದ ಇನ್ನಷ್ಟು ಮೋಡಿ ಮಾಡುವ ಮೊದಲೇ ಶಂಕರ್ ರವರಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟು ದೈವಧೀನರಾದರು.

ಈಗಿನ ಪ್ರಸಿದ್ಧ ನಟರು/ನಿರ್ದೇಶಕರು ಆದ ಉಪೇಂದ್ರ ಮತ್ತು ರಮೇಶ್ ಸಹ ಇದೇ ಕಾಲಕ್ಕೆ ಸೇರಿದವರೇ. ತಮ್ಮ ಮ್ಯಾನರಿಸಮ್ ಇಂದ "ಎ" ಮತ್ತು "ಉಪೇಂದ್ರ" ಚಿತ್ರಗಳನ್ನು ಗೆಲ್ಲಿಸಿಕೊಟ್ಟ ಉಪೇಂದ್ರರವರು ಅಭಿಮಾನಿಗಳ ಪಾಲಿಗೆ "ರಿಯಲ್ ಸ್ಟಾರ್" ರಾದರು. ಅವರ "ಓ೦" ಮತ್ತು "ಶ್.." ಸಹ ಭರವಸೆ ಮೂಡಿಸಿದ ಚಿತ್ರಗಳು. ನಟಿಯರಲ್ಲಿ ಭವ್ಯ, ಮಹಲಕ್ಷ್ಮಿ, ತಾರಾ, ವನಿತಾ ವಾಸು, ಪ್ರೇಮಾ ಸಹ ತಮ್ಮ ಅಭಿನಯ ಸಾಮರ್ಥ್ಯ ತೋರಿಸಿದರು. ಇವರೆಲ್ಲರು ನಾಯಕ ನಟರಷ್ಟು ದೀರ್ಘ ಕಾಲ ಚಿತ್ರರಂಗದಲ್ಲಿ ಇರಲು ಸಾಧ್ಯವಾಗಲಿಲ್ಲ.

"ಅರಗಿಣಿ" ಮತ್ತು "ಓ ಮಲ್ಲಿಗೆ" ಚಿತ್ರಗಳಿಂದ ಪ್ರಸಿದ್ಧರಾದ ರಮೇಶ್ ತಮ್ಮ ಅಭಿನಯದಿಂದಲೇ ಪ್ರಸಿದ್ಧರಾಗಿದ್ದರು. "ತ್ಯಾಗರಾಜ" ಬಿರುದೇ ಅದಕ್ಕೆ ಸಾಕ್ಷಿ... ಇವರು ಮುಂದೆ "ಆಕ್ಸಿಡೆಂಟ್" ಮತ್ತು ಹಲವು ಚಿತ್ರಗಳನ್ನು ಸಹ ನಿರ್ದೇಶಿಸಿದರು.

ಡಾ|| ರಾಜ್ ಕುಟುಂಬದಲ್ಲಿ ಮೂರನೆಯವರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟವರೇ ಅಪ್ಪು -- ಪುನೀತ್ ರಾಜ್ ಕುಮಾರ್. ತಮ್ಮ "ಅಪ್ಪು" ಚಿತ್ರದಿಂದ ಎಲ್ಲರ ಹೃದಯ ಗೆದ್ದ ಅಪ್ಪು ರವರು ಈಗಲೂ ಬಹುಬೇಡಿಕೆಯ ನಟ.

ತೂಗುದೀಪ ಶ್ರೀನಿವಾಸ್ ರವರ ಪುತ್ರರಾದ ದರ್ಶನ್ ಕಿರುತರೆ ಮತ್ತು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳನ್ನು ನಿರ್ವಹಿಸಿ "ಮೆಜೆಸ್ಟಿಕ್" ಚಿತ್ರದಿಂದ ಜನಪ್ರಿಯರಾದರು. "ಕರಿಯ" ಚಿತ್ರ ಅವರನ್ನು ಅಭಿಮಾನಿಗಳಿಗೆ "ಚಾಲೆಂಜಿಂಗ್ ಸ್ಟಾರ್" ಮಾಡಿಸಿತು. ಇಂದೂ ಸಹ ಅವರ ಅಕ್ಷನ್ ಚಿತ್ರಗಳೆಂದರೆ ಅಭಿಮಾನಿಗಳಿಗೆ ಪಂಚಪ್ರಾಣ. ಹಲವು ನಟರ/ನಟಿಯರ ಮಕ್ಕಳು ಚಿತ್ರರಂಗಕ್ಕೆ ಬಂದರೂ ದರ್ಶನ್ ಅವರಷ್ಟು ಜನಪ್ರಿಯ ಅವರಾಗಲಿಲ್ಲ.

೯೫ ರ ನಂತರದ ಸಮಯದಲ್ಲಿ ನಮ್ಮ ಚಿತ್ರರಂಗ ಕೆಳಮುಖದ ಹಾದಿ ಹಿಡಿ ಹಿಡಿಯಿತು. ಚಿ. ಉದಯಶಂಕರರ ಅಕಾಲಿಕ ಸಾವು, ಹಲವು ಪ್ರಸಿದ್ಧರನ್ನ ಕಳೆದುಕೊಂಡ ನಮ್ಮ ಕನ್ನಡ ಚಿತ್ರರಂಗ ಬಡವಾಗತೊಡಗಿತು. "ಸಂತೆ ಗೆ ಮೂರು ಮಾರು" ನೇಯುವ ಕೆಲಸವು ಸಹ ಇಲ್ಲಿಂದಲೇ ಪ್ರಾರಂಭವಾಯಿತು. ಹಲವು ಟೇಕ್ ಗಳ ನಿರಂತರ ಪ್ರಯತ್ನದಿಂದ ಅಂದು ಒಂದು ಹಾಡು ಸಿದ್ದವಾಗುತ್ತಿದ್ದ ಆ ಸಮಯ ಹೋಗಿ "ಬಿಟ್ ಬೈ ಬಿಟ್" ಕಾರ್ಯ ಪ್ರಾರಂಭವಾಯಿತು. ದಿನಕ್ಕೊಂದು ಸಂಗೀತ/ ಚಿತ್ರ ನಿರ್ದೇಶಕರು ಬರತೊಡಗಿದರು. "ಇತರ ಮೂಲಗಳ" ಹಣ ಹರಿದು ಬಂದು ಎಲ್ಲಾ ಜನರು "ನಿರ್ಮಾಪಕರು" ರಾಗತೊಡಗಿದರು. ಅವರ ಮಕ್ಕಳು ಮತ್ತು ಹತ್ತಿರದ ಸಂಬಂಧಿಗಳು ಚಿತ್ರದ ಪ್ರಮುಖ ಪಾತ್ರ ಮಾಡತೊಡಗಿದರು. ಕೆಲವರು ಕೇವಲ ಪ್ರಚಾರಕ್ಕೆ ಮಾತ್ರ ಚಿತ್ರ ಮುಹೂರ್ತ ಮಾಡಿಸಿ ಅಮೇಲೆ "ಸುದ್ಧಿ" ಇಲ್ಲದೇ ಹೋಗುತ್ತಿದ್ದರು. "ನಮ್ಮ ಚಿತ್ರ ವಿಭಿನ್ನ ಕಥೆ ಹೊಂದಿದೆ" ಅಂತ ಹೇಳಿದ ಹಲವು ಚಿತ್ರಗಳು ಟೇಟರಿಗೆ ಬಂದ ಒಂದು ವಾರದ ಒಳಗೆ "ಮಾಯವಾಗತೊಡಗಿತು". ೬೦ ರ ದಶಕದಿಂದ ೮೦ ರ ಕೊನೆವರೆಗೂ ಹಲವು ಕಾದಂಬರಿ ಅಧಾರಿತ ಚಿತ್ರಗಳು ಬಂದರೂ ನಂತರ "ಒಳ್ಳೆ ಕಥೆ" ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮ ಚಿತ್ರ "ಪಂಡಿತರು" -- ಪಕ್ಕದ "ಮನೆಯ" "ಕದ್ದ ಸರಕು" ಗಳನ್ನು ಬಳಸತೊಡಗಿದರು... ಹೆಸರಿಗೆ ಕೆಲವು "ಹಿಟ್" ಆಯಿತಾದರೂ, ಬಹುತೇಕ ಚಿತ್ರಗಳು "ಮಣ್ಣು" ಮುಕ್ಕಿದ್ದೇ ಆಯಿತು ಅಷ್ಟೆ...!

ಪರಭಾಷ ನಟಿಯರ "ಆಮದು" ಕಾರ್ಯ "ನಮ್ಮ ನಾಡಿನಲ್ಲಿ ಪಾತ್ರಕ್ಕೆ ಸೂಟ್ ಆಗೋ ನಾಯಕಿ ಸಿಗ್ತಾ ಇಲ್ಲ" ಎಂಬ "ಪಿಳ್ಳೆ ನೆವ" ಇಂದ ಹೆಚ್ಚತೊಡಗಿತು. ಅವರಿಗೋ ನಮ್ಮ ಭಾಷೆ ಬರದು, ಯಾರೋ ಹೇಳಿದಂತೆ "ಉಲಿಯುವ" ಅವರು ನಮ್ಮ ಚಿತ್ರಗಳಿಗೆ ಎನು ತಾನೇ ಮಾಡಬಲ್ಲರು..? ಅಂತೂ ಈ "ಘನ ಕಾರ್ಯ" ದಿಂದ ನಮ್ಮ ನಾಡಿನ ನಟಿಯರು ಮೂಲೆಗುಂಪಾಗದೇ ಮತ್ತೇನು ಮಾಡಿಯಾರು!

ಕೇವಲ ಹಣದ "ವ್ಯಾಪಾರಕ್ಕೆ" ಬಂದಂತಿರುವ ಈ ಜನ ನಮ್ಮ ಚಿತ್ರ ರಂಗಕ್ಕೆ ಏನು ಕೊಡುವರೋ ಗೊತ್ತಿಲ್ಲ. ಅಂತು ಸರಕು "ಸುತ್ತಿ-ಸುತ್ತಿ" ಹಾಕುವ "ಚಾಳಿ" ಯಿಂದ ನಮ್ಮ ಕನ್ನಡ ಚಿತ್ರಕ್ಕೆ ಭಾರಿ ನಷ್ಟವಾಗುತ್ತಿರುವುದು ಮಾತ್ರ ಕಂಡಿತ. ಕೆಲವನ್ನು ಬಿಟ್ಟರೆ ( ಮುಂಗಾರು ಮಳೆ, ದುನಿಯಾ ಮತ್ತು ಇತ್ತೀಚಿಗಿನ "ಮನಸಾರೆ"...) ಇತರ ಚಿತ್ರಗಳು ತಾವು ಸೋಲುವುದಲ್ಲದೇ ತಮ್ಮ ಕೆಟ್ಟ ಕಥಾ ಸರಕಿನಿಂದ ಪ್ರೇಕ್ಷಕರು ಮತ್ತೆ ಚಿತ್ರಮಂದಿರದ ಹತ್ತಿರ ಸುಳಿಯದಂತೆ ಮಾಡುತ್ತಿವೆ.

ಹಾಗೇ ನಟರ ಸಂಭಾವನೆ, ನಿರ್ಮಾಪಕ-ಪ್ರದರ್ಶಕರ ನಡುವಿನ "ಒಳ ಕಿತ್ತಾಟ", ನಟರ ನಡುವಿನ "ವೈಮನಸ್ಸು" ನಮ್ಮ ಚಿತ್ರರಂಗದ ಬೇರುಗಳನ್ನು ಗೆದ್ದಲ ಹುಳುಗಳಂತೆ ಕೊರೆಯತೊಡಗಿವೆ. ಅದರಿಂದ ನಮ್ಮ ಭವ್ಯ ಇತಿಹಾಸದ ಕನ್ನಡ ಚಿತ್ರರಂಗದ ತಳಪಾಯ ಅಲುಗಾಡತೊಡಗಿದೆ. ನಮ್ಮ ನೆರೆರಾಜ್ಯದಲ್ಲಿ ಮಾಡುವ ಸದಾಭಿರುಚಿಯ ಚಿತ್ರಗಳು ಇಲ್ಲಿ ಕಮ್ಮಿಯಾಗುತ್ತಾ ಹೋಗುತ್ತಿವೆ. ಹೀಗೆ ಆದರೆ ಬಹುಶ್: ನಮ್ಮ ಮುಂದಿನ ಪೀಳಿಗೆಗೆ ಕೇವಲ ಹಳೆಯ ಚಿತ್ರಗಳನ್ನೇ ನೋಡಿಸಿ ನಾವೆಲ್ಲರು ಸಂತೋಷಪಡಬೇಕೇನೋ..?
ವಿಭಾಗ: edit post
0 Responses

Post a Comment